ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ
ಪ್ರವೀಣ್. ಟಿ. ಎಲ್
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)
ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.
ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ.
ಅಂದರೆ ಸಾಹಿತಿಗಳು ಹಾಗೂ ಸಾಹಿತ್ಯ ಪ್ರಕಾರವು ಯಾವಾಗಿನಿಂದ ಮತ್ತು ಏಕೆ ಜಾತಿ ರಾಜಕೀಯದ ಗುಂಪುಗಳಿಗೆ ಮಹತ್ವಪೂರ್ಣ ಎನಿಸತೊಡಗಿದ್ದಾರೆ ಎಂಬುದು ಕುತೂಹಲಕಾರಿ ಪ್ರಶ್ನೆ. ಅಂದರೆ ಕಲ್ಪಿತ ಕಥೆಗಳನ್ನು ವಾಸ್ತವಿಕ ಟೀಕೆಗಳು ಹಾಗೂ ಸಾಹಿತಿಯ ರಾಜಕೀಯ ನಿಲುವನ್ನು ಪ್ರತಿಬಿಂಬಿಸುತ್ತವೆ ಎಂಬುದಾಗಿ ಈ ಜಾತಿ ಗುಂಪುಗಳು ಏಕೆ ವಿವಾದವನ್ನಾಗಿ ಮಾಡತೊಡಗಿವೆ? ಇದು ಒಂದೊ ನಮ್ಮ ಆಧುನಿಕ ರಾಜಕೀಯವು ಬೆಳೆದು ಬರುತ್ತಿರುವ ವೈಖರಿಗೆ ಸಂಬಂಧಿಸಿರಬಹುದು, ಇಲ್ಲ ಸಾಹಿತ್ಯವು ತನ್ನನ್ನು ಹೇಗೆ ಬಿಂಬಿಸಿಕೊಂಡಿದೆ ಎಂಬುದಕ್ಕೂ ಸಂಬಂಧಿಸಿರಬಹುದು. ಇಲ್ಲ ಇವೆರಡರ ಪರಸ್ಪರರ ದ್ವಂದ್ವಾತ್ಮಕ ಸಂಬಂಧದ ಪರಿಣಾಮವೂ ಇರಬಹುದು. ಆಧುನಿಕ ಸಾಹಿತ್ಯವು ರಾಜಕೀಯ ಬದ್ಧತೆಯನ್ನು ತನ್ನ ಒಂದು ಮೌಲ್ಯವನ್ನಾಗಿ ಸ್ವೀಕರಿಸಿದೆ. ಹಾಗೂ ಸಾಹಿತ್ಯ ಪ್ರಕಾರಗಳನ್ನು ಸಾಮಾಜಿಕ ಸತ್ಯಗಳು (ಇತಿಹಾಸಗಳು), ಹಾಗೂ ಸಾಹಿತ್ಯ ಕೃತಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಾಧನಗಳು ಎಂದೇ ನಾವೆಲ್ಲ ಭಾವಿಸಿದ್ದೇವೆ. ಈ ರೀತಿಯಲ್ಲಿ ಸಾಹಿತ್ಯವಂತೂ ರಾಜಕೀಯದ ಜೊತೆಗೆ ತನ್ನ ಈ ದ್ವಂದ್ವಾತ್ಮಕ ಸಂಬಂಧವನ್ನು ಸಾರಿಕೊಂಡೇ ಬಂದಿದೆ. ತಮ್ಮ ಕಥೆಯು ಸಾಮಾಜಿಕ ವಾಸ್ತವವನ್ನು ಬಿಂಬಿಸುತ್ತದೆ ಎಂಬುದನ್ನು ಸಾಹಿತಿಗಳೂ ನಂಬಿದ್ದಾರೆ. ಹಾಗಿರುವಾಗ ತಮ್ಮ ಕಥೆ ಕೇವಲ ಕಥೆ ಎಂಬುದಾಗಿ ಹೇಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈ ನಂಬಿಕೆಯನ್ನು ಇಟ್ಟುಕೊಂಡ ಸಾಹಿತಿಗಳಿಗೆ ಈ ಮೇಲಿನಂಥ ಘಟನೆಗಳಲ್ಲಿ ಸಾಹಿತ್ಯಕ್ಕೂ ಸಾಮಾಜಿಕ ವಾಸ್ತವಕ್ಕೂ ಇರುವ ಸಂಬಂಧದ ಕುರಿತು ಇಬ್ಬಂದಿ ನಿಲುವು ಹುಟ್ಟುತ್ತದೆ.
ಇದಕ್ಕೆ ನಿದರ್ಶನವಾಗಿ ‘ಗಾಂಧಿಬಂದ’ದ ಲೇಖಕರೇ ತಮ್ಮ ಕುರಿತು ಬಂದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ (ಪ್ರಜಾವಾಣಿಯ ‘ಸಂಗತ’ದಲ್ಲಿ ದಿನಾಂಕ 29/11/2011ರಂದು) ‘ಕಥಾವಿನ್ಯಾಸ’ವಿರುವ ಪಾತ್ರಗಳ ಮಾತುಗಳನ್ನು ‘ಜಾತಿನಿಂದನೆ’ ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಮೂಲಕ ಕಲಾಕೃತಿಯನ್ನು ವಾಸ್ತವವೆಂದು ಪರಿಗಣಿಸುವುದು ಸರಿಯಲ್ಲ ಎಂದು ಪ್ರತಿಪಾದಿಸುತ್ತಾರೆ. ಆಶ್ಚರ್ಯವೆಂದರೆ ಅದೇ ಲೇಖನದಲ್ಲಿಯೇ ‘ಬ್ರಾಹ್ಮಣ ಸಮಾಜದ ಗಂಡಸರು ಮತ್ತು ಹೆಂಗಸರಿಗೆ ಅನೈತಿಕ ಸಂಬಂಧಗಳ ಕಲ್ಪನೆಯೇ ಇಲ್ಲ’ ಎಂಬ ಶಿವಳ್ಳಿ ಬ್ರಾಹ್ಮಣ ಪರಿಷತ್ನ ಮಾತುಗಳನ್ನು ‘ಬಾಲಿಶ’ ಎಂದು ತೋರಿಸಲು ‘ಅನಂತಮೂರ್ತಿಯವರ ಸಂಸ್ಕಾರ’ ಕಾದಂಬರಿಯನ್ನು ನೋಡುವಂತೆ ಸಲಹೆ ನೀಡುತ್ತಾರೆ. ಅಂದರೆ ತಮ್ಮ ಕೃತಿಗೆ ಆರೋಪ ಎದುರಾದಾಗ, ಅದರಿಂದ ತಪ್ಪಿಸಿಕೊಳ್ಳಲು ‘ಗಾಂಧಿಬಂದ’ ಒಂದು ಕಲಾಕೃತಿಯಷ್ಟೇ ಎಂದು ಸಮಜಾಯಿಷಿ ನೀಡಿದ ಲೇಖಕರೇ ಮತ್ತೊಂದು ಕಾದಂಬರಿಯನ್ನು ‘ಸಮಾಜದ ವಾಸ್ತವ’ವನ್ನು ತಿಳಿದುಕೊಳ್ಳಲಿಕ್ಕೆ ಸಾಕ್ಷೀಕರಿಸುವುದನ್ನು ನೋಡುತ್ತೇವೆ. ಸಾಹಿತಿಗಳು, ವಿಮರ್ಶಕರು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸುಸಂದರ್ಭವಾಗಿದೆ ಎಂದು ಭಾವಿಸುತ್ತೇನೆ.
ಸೃಜನಶೀಲ ಕೃತಿಯೊಂದನ್ನು ಸಾಮಾಜಿಕ ವಾಸ್ತವದ ಪ್ರತಿಬಿಂಬವೆಂದು ಬಿಂಬಿಸುತ್ತಿರುವುದಕ್ಕೂ ಈ ರೀತಿಯ ನಿಷೇದದ ಒತ್ತಾಯಕ್ಕೂ ಒಂದು ತಾರ್ಕಿಕ ಸಂಬಂಧವಿರುವಂತೆ ಭಾಸವಾಗುತ್ತಿದೆ. ಬಹುಶಃ ಯಾವ ರಾಜಕೀಯ ಸಂಸ್ಕೃತಿಯ ಭಾಗವಾಗಿ ಒಂದೆಡೆ ಸಾಹಿತ್ಯವೂ ಮತ್ತೊಂದೆಡೆ ಅದರ ಸತ್ಯಗಳನ್ನು ಆಧರಿಸಿದ ಸಾಮಾಜಿಕ ಗುಂಪುಗಳೂ ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲವಾಗಿವೆಯೊ ಅಂಥ ರಾಜಕೀಯ ವ್ಯವಸ್ಥೆಯೇ ಈ ತರ್ಕವನ್ನು ಸೃಷ್ಟಿಸುತ್ತಿರಬಹುದು. ಹಾಗಾಗಿಯೇ ಆಧುನಿಕ ಸಾಹಿತ್ಯ ಕೃತಿಯನ್ನು ಬರೆಯುವವರು ಹಾಗೂ ಓದುವವರು ಜಾನಪದ ಕಲೆಗಳ ಕಲಾವಿದರಿಗಿಂತ ಪ್ರೇಕ್ಷಕರಿಗಿಂತ ಬೇರೊಂದು ಸಾಂಸ್ಕೃತಿಕ ಸಂದರ್ಭಕ್ಕೆ ಸೇರಿದಂತೆ ಕಾಣುತ್ತಾರೆ ಅಥವಾ ಆಧುನಿಕ ಕಥಾ ಸಾಹಿತ್ಯವು ತನ್ನ ಅಸ್ತಿತ್ವಕ್ಕೆ ಬೇರೊಂದೇ ಮನೋಭಾವನೆಯನ್ನು ಬೇಡುತ್ತಿರುವಂತೆ ಕಾಣಿಸುತ್ತಿದೆ.
ಮಡೆಸ್ನಾನ ಹೊಸ ತಿರುವು
ಸಂತೋಷ್ ಕುಮಾರ್
ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ ಆದೇಶವನ್ನೂ ಸಹ ನೀಡಲಾಯಿತು. ಇದನ್ನು ರಾಜಕೀಯ ವ್ಯವಸ್ಥೆಯ ಲೋಪದೋಷ ಅಥವಾ ದೌರ್ಬಲ್ಯ ಹಾಗೂ ಆಚರಣೆಯ ಅಥವಾ ಅದನ್ನು ಆಚರಿಸುವವರ ಸಂಸ್ಕೃತಿಯ ವಿಶಿಷ್ಟತೆ ಎಂಬ ಎರಡೂ ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಇಲ್ಲಿ ಎರಡನೇ ಆಯಾಮದಿಂದ ಈ ಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗುವುದು.
ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಹೊರಡಿಸುತ್ತಿದ್ದಂತೆ ವಿಶೇಷವಾಗಿ ನಮಗೆ ಆ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬ ಕುತೂಹಲವಿತ್ತು. ಏಕೆಂದರೆ ಇದೇ ಮಡೆಸ್ನಾದ ಕುರಿತು ಹಿಂದೊಮ್ಮೆ ಸಂಪದ ಬ್ಲಾಗ್ ನಲ್ಲಿ ಧೀರ್ಘವಾದ ಚರ್ಚೆಯನ್ನು ಮಾಡಿದ್ದೆವು. ಆ ಚರ್ಚೆಯಲ್ಲಿ ಮಡೆಸ್ನಾನದ ಮೇಲೆ ನಿಷೇಧವನ್ನು ಹೇರಲು ಭಕ್ತರುಗಳಿಗಿಂತ ಬೇರೆಯವರು ಒತ್ತಾಯ ಮಾಡಿರುವುದು ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲು ಆಸ್ಪದ ಮಾಡಿಕೊಡುತ್ತದೆ. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಬಂದ ಕೂಡಲೆ ದೇವಾಳಯದ ತೇರನ್ನು (ಬ್ರಹ್ಮರಥ) ಸಿಂಗರಿಸುವ ಮಲೆಕುಡಿಯ ಸಮುದಾಯದವರು ತಮ್ಮ ಕಾರ್ಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನ್ನ ಆದೇಶವನ್ನು ಹಿಂಪಡೆಯಬೇಕಾಯಿತು. ಮಲೆಕುಡಿಯ ಸಮುದಾಯವು ಮಡೆಸ್ನಾನವನ್ನು ನಿಲ್ಲಿಸಿದರೆ ರಥವನ್ನು ತಾವು ಸಿಂಗರಿಸುವುದಿಲ್ಲ ಎಂಬುದಾಗಿ ಹಾಗೂ ನಮ್ಮ ಸಂಪ್ರದಾಯಗಳಲ್ಲಿ ಇತರರು ಮಧ್ಯಪ್ರವೇಶ ಮಾಡುವುದು ಅಥವಾ ಅದನ್ನು ಮುರಿಯುವುದು ತರವಲ್ಲ ಎಂಬುದು ಅವರ ನಿಲುವಾಗಿತ್ತು. ಹೀಗೆ ಹೇಳುವ ಮೂಲಕ ಆಚರಣೆಗಳನ್ನು ನಿಷೇಧಿಸುವ ಅಥವಾ ರದ್ದುಗೊಳಿಸುವ ಹಕ್ಕು ಅದನ್ನು ಆಚರಿಸುವವರಿಗೆ ಇರುತ್ತದೆಯೇ ಹೊರತು ಆಡಳಿತ ನಿರ್ವಹಿಸುವ ಸಂಸ್ಥೆಗಳಿಗಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ. ಎಲ್ಲಿಯವರೆಗೆ ಆಚರಣೆಗಳಲ್ಲಿ ಅವರಿಗೆ ದೋಷಗಳು ಕಂಡುಬರುವುದಿಲ್ಲವೋ ಅಲ್ಲಿಯವರೆಗೆ ಅದನ್ನು ನಿಲ್ಲಿಸಲು ಅವರಿಗೆ ಸಕಾರಣಗಳು ದೊರಕುವುದಿಲ್ಲ. ಈಗಲೂ ಅದನ್ನೇ ಆ ಸಮುದಾಯದವರು ಮಾಡಿದ್ದಾರೆ. ಹಾಗಾದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಏಳುತ್ತದೆ ಅದನ್ನು ಕೇಳುವ ಮೂಲಕ ನನ್ನ ಅನಿಸಿಕೆಯನ್ನು ಮುಗಿಸುತ್ತೇನೆ. ಮಡೆಸ್ನಾನದಂತಹ ಆಚರಣೆಯಲ್ಲಿ ದಲಿತ ಸಂಘಟನೆಗಳಿಗೆ ಹಾಗೂ ಆಡಳಿತಾತ್ಮಕ ಸಂಸ್ಥೆಗಳಿಗೆ ಗೋಚರಿಸುವ ಅನ್ಯಾಯ, ಅಕ್ರಮ, ಶೋಷಣೆಗಳು ಅದನ್ನು ಆಚರಿಸುವವರಿಗೆ ಏಕೆ ಕಾಣುವುದಿಲ್ಲ?
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ
- ರಮಾನಂದ ಐನಕೈ
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ
Published in www.nilume.wordpress.com
ನಮ್ಮೂರಿನಲ್ಲೊಬ್ಬ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಿದ್ದಾರೆ. ಎಂ.ಎಸ್.ಸಿ.ಯಲ್ಲಿ ಬಂಗಾ ರದ ಪದಕ ಪಡೆದವರು. ನಿವೃತ್ತಿಯ ನಂತರ ಊರಿಗೆ ಬಂದು ಕೃಷಿಕರಾಗಿದ್ದಾರೆ. ಅವರಿಗೆ ಗೊತ್ತಿ ಲ್ಲದ ವಿಷಯವಿಲ್ಲ. ಯಾವ ಕ್ಷೇತ್ರದ ಬಗ್ಗಾದರೂ ಘಂಟೆಗಟ್ಟಲೇ ಮಾತನಾಡುತ್ತಾರೆ. ತಮಗೆ ಸಿಕ್ಕಾ ಪಟ್ಟೆ ಜ್ಞಾನವಿದೆಯೆಂಬ ಅಹಂಕಾರವೂ ಇದೆ. ಆದರೆ ಒಂದು ತೊಂದರೆ ಅಂದರೆ ಅವರು ಅಂದು ಕೊಂಡಂತೆ ಒಂದೂ ಆಗುವುದಿಲ್ಲ. ಅವರ ಮಾತಿ ನಲ್ಲಿ ತೋರುವ ಚಾಕಚಕ್ಯತೆ ಕೃತಿಯಲ್ಲಿ ಕಾಣುವು ದಿಲ್ಲ. ಉದಾಹರಣೆಗೆ ಅವರು ಶಕ್ತಿಯ ಮೂಲದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ವಿದ್ಯುತ್ ಅನ್ವೇಷಣೆಯ ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ವಿದ್ಯುತ್ ಕಂಡು ಹಿಡಿದ ವರು, ವಿದ್ಯುತ್ ಹೇಗೆ ಉತ್ಪಾದಿಸಲ್ಪಡುತ್ತದೆ; ತಂತಿ ಹೇಗೆ ವಿದ್ಯುತ್ ವಾಹಕವಾಗುತ್ತದೆ; ಬಲ್ಪಿನ ಒಳ ಗಡೆಯಿಂದ ಹೇಗೆ ಪ್ರಕಾಶ ನೀಡುತ್ತದೆ ಇತ್ಯಾದಿ. ಅವರ ನೆಚ್ಚಿನ ಆಳು ಶಂಕರ. ಆತ ಅಕ್ಷರ ಜ್ಞಾನಿಯಲ್ಲ. ಅವನಿಗೆ ಈ ಪ್ರಪಂಚದ ಬಗ್ಗೆ ಕಡಿಮೆ ತಿಳುವಳಿಕೆ ಇದೆ. ಮೇಸ್ಟ್ರು ಹೇಳಿದಷ್ಟು ಮಾಡುವುದು ಅವನ ಕಾಯಕ. ವಿದ್ಯುತ್ತಿನ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುವ ಪ್ರಾಧ್ಯಾಪಕರಿಗೆ ಮನೆಯಲ್ಲಿ ಫ್ಯೂಸ್ ಹೋದರೆ, ಹೋಲ್ಡರಿನಲ್ಲಿ ವಯರ್ ಬಿಟ್ಟರೆ ಹಾಕಲು ಬರುವುದಿಲ್ಲ. ಆ ಕೆಲಸ ಮಾಡುವವನು ಶಂಕರ. ವಿದ್ಯುತ್ತಿಗೆ ಸಂಬಂಧಿಸಿದ ಅಷ್ಟೂ ರಿಪೇರಿ ಕೆಲಸವನ್ನು ಶಂಕರ ಮಾಡುತ್ತಾನೆ. ಆತನನ್ನು ಕೇಳಿ ದರೆ ತನಗೆ ಇದರ ಬಗ್ಗೆ ತಿಳುವಳಿಕೆಯೇನಿಲ್ಲ. ಹೀಗೆ ಮಾಡಿ ಮಾಡಿ ಕಲಿತೆ ಅನ್ನುತ್ತಾನೆ. ಜೀವನದ ಚಿಕ್ಕ ಕೆಲಸಕ್ಕೆ ನೆರವಿಗೆ ಬಾರದ ಪ್ರಾಧ್ಯಾಪಕರ ಪಾಂಡಿತ್ಯವನ್ನು ಏನನ್ನೋಣ? ಪ್ರಾಧ್ಯಾಪಕರದ್ದು ಲೋಕಜ್ಞಾನ, ಶಂಕರನದ್ದು ಕ್ರಿಯಾಜ್ಞಾನ ಅನ್ನೋಣವೇ? ಉತ್ತರ ಗೊತ್ತಿಲ್ಲ. ಹುಡುಕಲು ಪ್ರಯತ್ನಿಸೋಣ.
ಭಾರತಕ್ಕೂ ಹಾಗೂ ಐರೋಪ್ಯ ರಾಷ್ಟ್ರಗಳಿಗೂ ಇದ್ದ ಮುಖ್ಯ ವ್ಯತ್ಯಾಸ ಅಂದರೆ ಇದೇ. ಐರೋಪ್ಯ ರಾಷ್ಟ್ರಗಳು ನಿರ್ದೆಶಿಸಲ್ಪಡುವುದು ರಿಲಿಜನ್ಗಳ ಮೂಲಕ. ರಿಲಿಜನ್ ಇರಬೇಕಾದರೆ ಲೋಕಜ್ಞಾನ ಇರಲೇಬೇಕು. ಆದರೆ ಭಾರತ ಸಂಪ್ರದಾಯಗಳ ಮೂಲಕ ಕಟ್ಟಲ್ಪಟ್ಟಿದ್ದು. ಸಂಪ್ರದಾಯಗಳ ಆಚರಣೆ ಅಂದರೆ ಒಂದು ರೀತಿಯ ಕ್ರಿಯಾಜ್ಞಾನ. ನಮ್ಮ ಒಂದೊಂದು ಸಂಪ್ರದಾಯಗಳೂ ಒಂದಿ ಲ್ಲೊಂದು ರೀತಿಯ ಕ್ರಿಯಾಜ್ಞಾನವನ್ನು ಒದಗಿಸಿ ಕೊಡುತ್ತದೆ. ಹಾಗಾಗಿ ಭಾರತದಲ್ಲಿ ವೈವಿಧ್ಯತೆ ಇದೆ. ಇಲ್ಲಿ ಬದುಕುವವರು ಜೀವನ ಏಕತಾನತೆ ಎಂದು ಭಾವಿಸುವುದಿಲ್ಲ.
ಲೋಕಜ್ಞಾನ ಎಂಬುದು ರಿಲಿಜನ್ನ ಪರಿಭಾಷೆ. ರಿಲಿಜನ್ ಒಂದು ವಿಶಿಷ್ಟವಾದ ಕಲಿಕಾ ವಿಧಾನವನ್ನು ನೀಡುತ್ತದೆ. ಕ್ರಿಯೆಯ ಕುರಿತು ತಿಳಿದುಕೊಳ್ಳುವುದು, ಕ್ರಿಯೆಯ ಕುರಿತು ಸಿದ್ಧಾಂತ ಗಳನ್ನು ಬೆಳೆಸುವುದು, ನಮ್ಮ ಲೋಕಕಲ್ಪನೆಯೊಳಗೆ ಕ್ರಿಯೆ ಗಳನ್ನು ಅರ್ಥಪೂರ್ಣವಾಗಿ ಜೋಡಿಸುವುದು ರಿಲಿಜನ್ ನಿಂದ ಹುಟ್ಟುವ ಕಲಿಕಾ ವಿಧಾನ. ಪಾಶ್ಚಾತ್ಯರು ಇಡೀ ಪ್ರಪಂಚವೇ ಸತ್ಯದೇವ (God)ನ ಉದ್ದೇಶ ಎಂದು ನಂಬಿದವರು. ಹಾಗಾಗಿ ಇಲ್ಲಿನ ಪ್ರತಿಯೊಂದು ಕ್ರಿಯೆ ಯಲ್ಲೂ ಸತ್ಯದೇವನ ಉದ್ದೇಶವಿದೆ. ಅದನ್ನು ತಿಳಿದುಕೊಳ್ಳದೇ ಕ್ರಿಯೆ ಗಳನ್ನು ಮಾಡುವ ಹಾಗಿಲ್ಲ. ಕ್ರಿಯೆಗಳನ್ನು ಸರಿಯಾಗಿ ನಡೆಸಲಿಕ್ಕೆ ಅದರ ಕುರಿತ ಜ್ಞಾನ ಅತ್ಯವಶ್ಯ. ಪ್ರತಿಯೊಂದು ಕ್ರಿಯೆಗೂ ಒಂದು ಉದ್ದೇಶ ಒಂದು ಅರ್ಥ ಇರಬೇಕು. ಆದ್ದರಿಂದ ಕ್ರಿಯೆಗಳ ಹಿಂದೆ ಸರಿಯಾದ ಉದ್ದೇಶ ಗಳನ್ನು ರೂಪಿಸಿಕೊಳ್ಳಲಿಕ್ಕೆ ಲೋಕಜ್ಞಾನ ಅತ್ಯವಶ್ಯಕ ವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಇದನ್ನು ನಂಬಿದೆ. ಇಂಥ ಸಂಸ್ಕೃತಿಗಳು ಮತ್ತೊಂದು ಸಂಸ್ಕೃ ತಿಯ ಕ್ರಿಯೆಗಳನ್ನು ಹೀಗೇ ನೋಡು ತ್ತದೆ. ಅಂದರೆ ಇನ್ನೊಂದು ಸಂಸ್ಕೃ ತಿಯ ಕ್ರಿಯೆಯ ಕುರಿತು ಸೈದ್ಧಾಂತಿಕ ಜ್ಞಾನವನ್ನು ಸೃಷ್ಟಿ ಮಾಡಿಕೊಂಡು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿ ಸುತ್ತದೆ. ಪಾಶ್ಚಾ ತ್ಯರು ಭಾರತೀಯ ಸಂಪ್ರದಾಯಗಳನ್ನು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿ ಸಿದ್ದು ಹೀಗೆ. ಅವರು ಕಲೆ ಸಾಹಿತ್ಯವನ್ನು ಅನು ಭವಕ್ಕೆ ತಂದುಕೊಳ್ಳುವುದು ಇದೇ ರೀತಿ. ಅವರ ಪ್ರಕಾರ ಕಲೆಯನ್ನು ಆಸ್ವಾದಿಸು ವುದು ಅಂದರೆ ಕಲೆಯಲ್ಲಿ ರುವ ಉದ್ದೇಶ, ಚಿಂತನೆ, ಸಂದೇಶ ಹಾಗೂ ಅದರ ಮಹತ್ವವನ್ನು ಅನುಭವಿಸು ವುದು. ಅವರ ಈ ಲೋಕ ಜ್ಞಾನದ ಕಾರಣದಿಂದಲೇ ಅವರಿಗೆ ಭಾರತೀಯ ಸಂಸ್ಕೃತಿ ಅರ್ಥಹೀನ ಅನಿ ಸಿದ್ದು. ಏಕೆಂದರೆ ಭಾರತೀಯ ಸಂಸ್ಕೃತಿ ಕಟ್ಟಲ್ಪಟ್ಟಿದ್ದು ಕ್ರಿಯಾಜ್ಞಾನದಲ್ಲಿ. ಕ್ರಿಯಾಜ್ಞಾನ ಅಂದರೇನು?
ಕ್ರಿಯಾಜ್ಞಾನ ಅಂದರೆ ಒಂದು ಕೆಲಸವನ್ನು ಮಾಡಬಲ್ಲ ಪರಿಣಿತಿ ಅಥವಾ ಜ್ಞಾನ. ಒಂದು ಕ್ರಿಯೆ ಯನ್ನು ನೋಡಿ ಅನುಕರಿಸಿ ಕಲಿಯುವುದು. ಇಲ್ಲಿ ಮಾಡುವ ಕೆಲಸದ ಉದ್ದೇಶದ ಹಂಗಿಲ್ಲ. ಕ್ರಿಯೆ ಗಳನ್ನು ಏಕೆ ಮಾಡಬೇಕೆಂಬುದರ ಬಗ್ಗೆ ಸಿದ್ಧಾಂತ ಗಳನ್ನು ಕಟ್ಟಿರುವುದಿಲ್ಲ. ಅದರ ಬದಲಾಗಿ ಕ್ರಿಯಾ ಪರಿಣಾಮಗಳ ಕುರಿ ತಾಗಿ ಬೇರೆ ಬೇರೆ ರೀತಿಯ ಸ್ವಾರಸ್ಯಕರ ಕಥೆಗಳನ್ನು ಬೆಳೆಸಲಾ ಗುತ್ತದೆ. ಈ ಹಿಂದೆ ಪ್ರಕಟವಾದ ‘ಸಂಪ್ರ ದಾಯಗಳ ಸುತ್ತ’ ಲೇಖನ ಓದಿದವರಿಗೆ ಇದು ಇನ್ನೂ ಸ್ಪಷ್ಟವಾಗು ತ್ತದೆ. ಸಂಪ್ರದಾಯಗಳ ಕುರಿತು ನಿದರ್ಿಷ್ಟ ಉದ್ದೇಶ, ಸಿದ್ಧಾಂತ, ಅರ್ಥ ಇರುವುದಿಲ್ಲ. ಆದರೂ ಕೂಡ ಒಂದು ಸಂಪ್ರದಾಯ ಆಚರಣೆ ಯಲ್ಲೇ ಅರ್ಥ ಪಡೆ ಯುತ್ತದೆ. ಹಾಗೂ ಈ ಅರ್ಥ ಸಮೂಹದಿಂದ ಸಮೂಹಕ್ಕೆ ಭಿನ್ನವಾಗಿರಲು ಸಾಧ್ಯ. ಒಟ್ಟಿನಲ್ಲಿ ಅದರಿಂದಾಗುವ ಅನುಭವ ಮಾತ್ರ ನಮಗೆ ಮುಖ್ಯ ವಾಗುತ್ತದೆ.
ಪಾಶ್ಚಾತ್ಯರು ಜಿಜ್ಞಾಸೆಯಿಲ್ಲದ ಕ್ರಿಯೆಗಳು ಅರ್ಥಹಿನ ಹಾಗೂ ಮೌಢ್ಯ ಎಂಬುದಾಗಿ ಪರಿಗಣಿಸಿ ದರು. ಸಿದ್ಧಾಂತಗಳನ್ನು ಬೆಳೆಸುವುದೇ ಜ್ಞಾನ ಎಂಬುದು ಅವರ ನಂಬಿಕೆ. ಅವರ ನಂಬಿಕೆಯಲ್ಲೇ ತೊಂದರೆ ಇದೆ. ಏಕೆಂದರೆ ಕ್ರಿಯೆಯನ್ನು ನಡೆಸು ವುದೇ ಒಂದು ಪ್ರಕಾರದ ಜ್ಞಾನ ಎಂಬುದನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದಾರೆ. ಪಾಶ್ಚಾತ್ಯರಿಗೆ ಭಾರತೀಯ ಆಚರಣೆಗಳು ಮೌಢ್ಯ ಹಾಗೂ ಅರ್ಥಹೀನ ಅನಿಸಿದ್ದು ಈ ಕಾರಣಕ್ಕಾಗಿ. ಭಾರತೀಯರಿಗೆ ತಾವು ಮಾಡುವ ಆಚರಣೆಗಳ ಕುರಿತು ಕಾರ್ಯ ಕಾರಣ ಸಂಬಂಧಗಳೇ ಗೊತ್ತಿಲ್ಲ. ಹಾಗಾಗಿ ಇದೊಂದು ಹಿಂದುಳಿದ ಅನಾಗರಿಕ ಸಂಸ್ಕೃತಿ ಎಂಬುದಾಗಿ ಕರೆದರು. ಅಷ್ಟೇಅಲ್ಲ, ಇವರ ಪ್ರತಿಯೊಂದು ಕ್ರಿಯೆಗಳಿಗೆ ಸಿದ್ಧಾಂತದ ನೆಲೆಯೊದ ಗಿಸುವುದೇ ಸುಧಾರಣೆ ಎಂಬುದಾಗಿ ಭಾವಿಸಿದರು. ಇದರಿಂದ ಪ್ರಭಾವಿತರಾದ ಭಾರತದಲ್ಲಿನ ಪ್ರಗತಿ ಪರರೂ ಕೂಡ ಇದೇ ತರ್ಕವನ್ನು ಅನುಸರಿಸಿ ವೈಚಾರಿಕತೆಯೇ ಶ್ರೇಷ್ಠ ಮೌಲ್ಯ ಎಂದು ಪ್ರತಿಪಾದಿ ಸುತ್ತ ಬಂದರು. ಈ ನಂಬಿಕೆ ನಮ್ಮ ಸೆಕ್ಯುಲರ್ ಚಿಂತನೆಯಲ್ಲಿ ಗಾಢವಾಗಿ ನೆಲೆಯೂರಿದೆ. ಅದನ್ನು ಬಾಲಗಂಗಾಧರರು ಸಮರ್ಥವಾಗಿ ತೋರಿಸುತ್ತಾರೆ.
ಕ್ರಿಯಾಜ್ಞಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ಇರುತ್ತದೆ. ಕಲಿತವ-ಕಲಿಯದವ, ಬಡವ -ಶ್ರೀಮಂತ ಎಂಬ ಭೇದಭಾವ ಇಲ್ಲ. ಹಾಗಾಗಿ ಕ್ರಿಯಾಜ್ಞಾನದಲ್ಲಿದ್ದಷ್ಟು ನೆಮ್ಮದಿ ಲೋಕಜ್ಞಾನದಲ್ಲಿ ಇಲ್ಲ. ಕ್ರಿಯಾಜ್ಞಾನವು ಒಂದು ಸಮುದಾಯವನ್ನು ಕಟ್ಟುತ್ತದೆ ಹಾಗೂ ಅವು ಉಳಿದುಕೊಂಡು ಬರು ವಂತೆ ಮಾಡುತ್ತದೆ. ಪೌರಾತ್ಯ ಸಮಾಜಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಈ ಕ್ರಿಯಾ ಜ್ಞಾನದ ಮಹತ್ವವನ್ನು ಅರಿಯಲಿಕ್ಕೆ ಸಾಧ್ಯವಾಗುತ್ತದೆ.
ರಿಲಿಜನ್ ಪ್ರಕಾರ ಈ ಲೋಕದಲ್ಲಿ ಏನೇ ಮಾಡುವುದಾದರೂ ಅದರ ಕುರಿತು ಜ್ಞಾನ ಅಗತ್ಯ. ಈ ಲೋಕದಲ್ಲಿನ ಕ್ರಿಯೆಗಳನ್ನು ಜರುಗಿಸಲು ಸತ್ಯ ದೇವ (ಗಾಡ್)ನ ಉದ್ದೇಶವೇನೆಂದು ತಿಳಿಯುವ ಅಗತ್ಯ ಇದೆ. ಆದ್ದರಿಂದ ಈ ಲೋಕದಲ್ಲಿ ಏನಿದೆ ಯೆಂಬ ತಿಳುವಳಿಕೆಯು ಈ ಲೋಕದಲ್ಲಿ ವ್ಯವಹರಿ ಸಲಿಕ್ಕೆ ಒಂದು ಪೂರ್ವಭಾವಿ ಅವಶ್ಯಕತೆಯಾಗಿದೆ. ಈ ಲೋಕದ ಕುರಿತಾದ ಜ್ಞಾನವು ಸರಿಯಾಗಿದ್ದರೆ ಕ್ರಿಯೆಗಳೂ ಸರಿಯಾಗಿರುತ್ತವೆ. ಅಂದರೆ ಜ್ಞಾನದ ಮಾರ್ಗದರ್ಶನ ಇರುವವರೆಗೆ ಈ ಲೋಕದಲ್ಲಿನ ಎಲ್ಲ ಚಟುವಟಿಕೆಗಳೂ ಸರಿಯಾಗೇ ಇರುತ್ತದೆ. ಅವರ ಪ್ರಕಾರ ಒಂದು ಒಳ್ಳೆಯ ಸಮಾಜ ಕಟ್ಟುವ ಪೂರ್ವದಲ್ಲಿ ಒಳ್ಳೆಯ ಸಮಾಜ ಎಂದರೇನೆಂಬು ದನ್ನು ತಿಳಿದಿರಬೇಕು.
ಇಷ್ಟೆಲ್ಲ ರಗಳೆ ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮಲ್ಲಿ ಮಾಡುವ ಕ್ರಿಯೆಯ ಕುರಿತು ಒಳ್ಳೆಯ ಸಂಕಲ್ಪ ಇದ್ದ ರಾಯಿತು. ಅದರ ಬಗ್ಗೆ ಜ್ಞಾನ ಇರಲೇಬೇಕೆಂದೇನೂ ಇಲ್ಲ. ಕ್ರಿಯೆಯನ್ನು ಮಾಡುವ ಜ್ಞಾನ ಇದ್ದರೆ ಸಾಕು. ಅದರ ಉದ್ದೇಶ, ಅರ್ಥ ನಮಗೆ ಬೇಡ. ಈ ಕ್ರಿಯಾಜ್ಞಾನ ಪರಂಪರೆಯಿಂದ, ಅನುಕರಣೆಯಿಂದ ಬರುತ್ತದೆ. ಆದ್ದರಿಂದ ಕ್ರಿಯಾಜ್ಞಾನದಲ್ಲಿ ಮನುಷ್ಯ ಸಂಬಂಧಗಳು ಅತ್ಯವಶ್ಯವಾಗಿರುತ್ತದೆ.
ಸತ್ಯದೇವನು ತನ್ನ ಸಂಕಲ್ಪದ ಕುರಿತಾಗಿ ನೀಡಿರುವ ಸಂದೇಶ ಮೌಖಿಕವಾಗಿರುವುದರಿಂದ ಅದು ಕೇವಲ ಜ್ಞಾನದ ಮೂಲ ಮಾತ್ರವಲ್ಲ, ಜ್ಞಾನದ ರೂಪವೇ ಆಗಿದೆ ಎಂಬುದು ಪಾಶ್ಚಾತ್ಯರ ನಂಬಿಕೆ. ಆದ್ದರಿಂದ ಎಲ್ಲ ಜ್ಞಾನವನ್ನು ಮಾತಿನ ಮೂಲಕ ಅಥವಾ ಭಾಷೆಯ ಮೂಲಕ ತಿಳಿಸ ಬಹುದು ಎಂಬ ಸರಳ ತೀಮರ್ಾನಕ್ಕೆ ಬರುತ್ತಾರೆ. ಮೌಖಿಕ ಸಂದೇಶ ನಮಗೆ ಪಠ್ಯವಾಗಿ ದೊರಕು ತ್ತದೆ. ಆ ಮೂಲಕ ಜ್ಞಾನ ಮುಂದುವರಿಯುತ್ತಾ ಬರುತ್ತದೆ. ಆದರೆ ಭಾರತೀಯ ಸಂಪ್ರದಾಯಗಳ ಕುರಿತು ಈ ರೀತಿಯ ಜ್ಞಾನದ ಪಠ್ಯವೇ ಇಲ್ಲ. ಆದರೂ ಸಾವಿರಾರು ವರ್ಷ ಇದು ಹೇಗೆ ನಡೆದುಬಂತು?
ಭಾರತೀಯ ಸಂಸ್ಕೃತಿ ಜ್ಞಾನ ಬೇರೆ, ಅನುಭವ ಬೇರೆ ಎಂದು ನಂಬಿದೆ. ಬೆಂಕಿಯ ಕುರಿತಾದ ಜ್ಞಾನ ಬೇರೆ, ಅದರ ಅನುಭವವೇ ಬೇರೆ. ಬೆಂಕಿಯ ಅನುಭವವನ್ನು ಹೇಗೆ ಲೋಕಜ್ಞಾನದಲ್ಲಿ ವರ್ಣಿಸುತ್ತೀರಿ? ಅದಕ್ಕೆ ಕ್ರಿಯಾಜ್ಞಾನವೇ ಬೇಕು. ಇಂಥ ಅನುಭವದ ಜ್ಞಾನಗಳು ನಮ್ಮಲ್ಲಿ ಹೇರಳವಾಗಿದೆ. ಲೋಕಜ್ಞಾನ ಗುರಿಯನ್ನು ಮುಖ್ಯವಾಗಿಟ್ಟುಕೊಳ್ಳತ್ತದೆ. ಆದರೆ ಕ್ರಿಯಾಜ್ಞಾನ ಮಾರ್ಗದ ಬಗ್ಗೆ ಲಕ್ಷ್ಯದಲ್ಲಿರುತ್ತದೆ. ಕ್ರಿಯಾಜ್ಞಾನದಲ್ಲಿ ಮಾರ್ಗವೇ ಗುರಿಯನ್ನು ನಿರ್ಧರಿಸುತ್ತದೆಯೇ ವಿನಾ ಜ್ಞಾನ ಅಲ್ಲ. ಆದ್ದರಿಂದ ನಮ್ಮಲ್ಲಿನ ಸಮಾಜಗಳ ಸೃಷ್ಟಿಗೆ ಹಾಗೂ ಪುನರುತ್ಪಾದನೆಗೆ ಕ್ರಿಯಾಜ್ಞಾನವೇ ಕಾರಣವಾಗಿದೆ.
ಈ ದೃಷ್ಟಿಯಿಂದ ರಿಲಿಜನ್ನು ಸಮುದಾಯಗಳನ್ನು ವಿಭಾಗಿಸುತ್ತದೆ. ಅದು ಅವುಗಳನ್ನು ಕೂಡಿಸುವುದಿಲ್ಲ. ನಮ್ಮ ವಿಧಿ ಆಚರಣೆಗಳು ಸಂಸ್ಕೃತಿಗಳನ್ನು ದಾಟಬಲ್ಲವಾದ್ದರಿಂದ ಸಮಾಜವನ್ನು ಕೂಡಿಸುತ್ತವೆಯೆಂಬ ಅಭಿಪ್ರಾಯವಿದೆ. (ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಪುಟ 488).
ಕ್ರಿಯಾಜ್ಞಾನದಲ್ಲಿ ಪ್ರಾಯೋಗಿಕ ಕಲಿಕೆಯು ಪ್ರಬಲವಾಗಿರುತ್ತದೆ. ಕ್ರಿಯಾಜ್ಞಾನದ ಕಲಿಕೆಯ ಸಂಯೋಜನೆಯು ಸ್ಥಿರವಾದದ್ದು. ಆಚರಣಾತ್ಮಕ ಅಥವಾ ಕ್ರಿಯಾತ್ಮಕ ಜ್ಞಾನ ಅಂದರೆ ಈ ಜಗತ್ತಿನಲ್ಲಿ ಕ್ರಿಯೆಗಳನ್ನು ಪುನರಾವರ್ತನೆ ಮಾಡುವ ಸಾಮರ್ಥ್ಯವಾಗಿದೆ. ಅಂತಹ ಒಂದು ಸಂಸ್ಕೃತಿಯಲ್ಲ್ಲಿ ಹುಟ್ಟಿದ ಸಾಮಾಜಿಕ ಪರಿಸರವು ಪುನರಾವರ್ತಕವಾಗಿದ್ದು, ಪುನರಾವರ್ತಕವಾದ ವ್ಯವಸ್ಥೆಗಳ ಗುಣಗಳನ್ನು ಪ್ರದರ್ಷಿಸುತ್ತದೆ. ಈ ಸಂಸ್ಕೃತಿ ಬೆಳೆದದ್ದು, ರೂಪಗೊಂಡದ್ದು ಹಾಗೂ ಬೆಳೆಯುತ್ತಿರುವುದು ಹೀಗೆ.
ಪಾಶ್ಚಾತ್ಯ ವಸಾಹತು ಪ್ರಭಾವದಿಂದ ಇಂತಹ ಚಿಕ್ಕ ಚಿಕ್ಕ ಸಂಗತಿಗಳೂ ಕೂಡ ನಮಗೆ ಗೊಂದಲವುಂಟು ಮಾಡುತ್ತಿವೆ. ಇಂದಿಗೂ ಕೂಡ ನಿಜವಾದ ಜ್ಞಾನದ ಕುರಿತು ನಾವು ಅಜ್ಞಾನದಿಂದಿದ್ದೇವೆ.
ಈಗ ನೀವೇ ನಿರ್ಧರಿಸಿ. ನಿಮಗೆ ಪ್ರಕಾಂಡ ಪಾಂಡಿತ್ಯ ಹೊಂದಿದ ಪ್ರಾಧ್ಯಾಪಕರು ಇಷ್ಟವೋ ಅಥವಾ ಗೊತ್ತಿಲದೆ ಸಮರ್ಥವಾಗಿ ಕೆಲಸ ಮಾಡುವ ಶಂಕರ ಇಷ್ಟವೋ?
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
Published in www.nilume.wordpress.com ಸಂಸ್ಕೃತಿ ಸಂಕಥನ – ೬
- ರಮಾನಂದ ಐನಕೈ
ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.
ಶಾತವಾಹನರ ಕಾಲದ ವಿಗ್ರಹವೆಂದು ನೂರೆಂಟು ವಿವರಗಳು ಅದರಲ್ಲಿ ಇದ್ದವು. ಪ್ರಕಟವಾಯಿತು. ಆದರೆ ಎರಡೇ ದಿನಗಳಲ್ಲಿ ಅವೇ ಪತ್ರಿಕೆಗಳಲ್ಲಿ ಪುನಃ ಸುದ್ದಿ ಬಂತು. ಶಂಕರ ಹೊಂಡದಲ್ಲಿ ಸಿಕ್ಕಿದ್ದು ಶಾತವಾಹನರ ಕಾಲದ ವಿಗ್ರಹವಲ್ಲ ಎಂಬ ತಲೆ ಬರಹವಿತ್ತು. ವಿಷಯ ಏನೆಂದರೆ ಶಂಕರ ಹೊಂಡ ಸ್ವಚ್ಛ ಮಾಡುವ ಒಂದು ವರ್ಷದ ಮೊದಲು ಅಲ್ಲೇ ಪಕ್ಕದಲ್ಲಿ ವಾಸಿಸುವ ಗೃಹಸ್ಥನೊಬ್ಬ ಕುಮಟಾದಿಂದ ವಿಗ್ರಹವೊಂದನ್ನು ಖರೀದಿಸಿ ತಂದಿದ್ದ. ಅಷ್ಟರ ನಂತರ ಅವನ ಮನೆಯಲ್ಲಿ ಅವಘಡಗಳೇ ಜರುಗಿದವು. ಕಂಗಾಲಾದ ಆತ ಜ್ಯೋತಿಷಿಗಳೊಬ್ಬರಲ್ಲಿ ಮೊರೆ ಹೋದ. ವಿಗ್ರಹದ ಕಾರಣದಿಂದ ಮನೆಯಲ್ಲಿ ತ್ಡೊಂದರೆಯಾಗಿದೆ. ಆದ್ದರಿಂದ ಆ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿಬಿಡು ಎಂದು ಜ್ಯೋತಿಷಿಗಳು ಸಲಹೆ ನೀಡಿದರು. ಗ್ರಹಸ್ಥ ಆ ಮೂರ್ತಿಯನ್ನು ಶಂಕರ ಹೊಂಡದೊಳಗೆ ಮುಳುಗಿಸಿದ. ಒಂದು ವರ್ಷದ ಹಿಂದಿನ ವಿಗ್ರಹ ಇತಿಹಾಸ ಸಂಶೋಧಕನ ಪ್ರತಿಭೆಯಲ್ಲಿ ಒಂದು ಸಾವಿರ ವರ್ಷ ಹಿಂದಿನ ವ್ಯಾಖ್ಯಾನ ಪಡೆಯಿತು! ಸಂಶೋಧನೆ ಯಾಕೆ ಮಾಡಬೇಕು? ಹೇಗೆ ಮಾಡಬೇಕು? ಅದರಿಂದ ಯಾರಿಗೆ ಪ್ರಯೋಜನ? – ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.
ಸಂಶೋಧನೆಗಳಿಗೂ ಸಮಾಜಕ್ಕೂ ಏನಾದರೂ ಸಂಬಂಧ ಇದೆಯೇ? ಅನೇಕ ಸಂದರ್ಭಗಳಲ್ಲಿ ಸಂಶೋಧಕರಿಗೂ ಹಾಗೂ ಅವರ ಸಂಶೋಧನೆಗೂ ಕೂಡ ಸಂಬಂಧ ಇರಲಾರದು. ಹೀಗಾದಾಗ ಸಮಾಜದಲ್ಲಿ ಒಂದು ಸುಸಂಬದ್ಧವಾದ ಚಿಂತನಾಕ್ರಮ ಬೆಳೆಯಲು ಸಾಧ್ಯವಿಲ್ಲ. ಯಾರೋ ಹೇಳಿದ ವಿಚಾರಗಳನ್ನು ನಕಲು ಮಾಡಿ ನಕಲು ಮಾಡಿ ಕೊನೆಗೆ ಆ ವಿಚಾರ ಯಾರಿಗೂ ಅರ್ಥವಾಗದ ಹ0ತ ತಲುಪಿಬಿಡುತ್ತದೆ.
ಹಾಗಾಗಿ ಈ ದೇಶದಲ್ಲಿ ಸಂಶೋಧನಾ ಕಾರ್ಯಕ್ರಮಕ್ಕೆ ಪುನರುಜ್ಜೀವನ ನೀಡಬೇಕಾಗಿದೆ. ಇಂಥ ಕೆಲಸ ಮಾಡುತ್ತಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಈ ಕೇಂದ್ರ ಕುವೆಂಪು ವಿಶ್ವವಿದ್ಯಾಲಯ ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರ ಹೇಗಿರಬೇಕೆಂಬುದಕ್ಕೆ ಮಾದರಿ ಇದು. ಜಗತ್ತಿನಲ್ಲೇ ಅದ್ಭುತ ಸಂಶೋಧನಾ ಮಾರ್ಗದರ್ಶಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರೊ. ಬಾಲಗಂಗಾಧರರ ಸಂಕಲ್ಪದ ಫಲ ಈ ಕೇಂದ್ರ. ಒಂದು ರೀತಿಯ ಗುರುಕುಲ ಮಾದರಿಯ ಮಾರ್ಗದರ್ಶನ ಇಲ್ಲಿದೆ. ಸಂಶೋಧನೆ ಮಾಡಲೇಬೇಕೆಂಬ ಪ್ರಬಲ ಇಚ್ಛೆ ಇದ್ದವರಿಗೆ ಮಾತ್ರ ಇಲ್ಲಿ ಪ್ರವೇಶ. ಪ್ರವೇಶಕ್ಕಾಗಿ ಮುನ್ನ ಕಠಿಣ ಪರೀಕ್ಷೆ!
ಇಲ್ಲಿ ಆಯ್ದುಕೊಳ್ಳಬಹುದಾದ ವಿಷಯ ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟಿದ್ದಾಗಿರಬೇಕು. ಸದ್ಯದ ಭಾರತೀಯ ಸಮಾಜವಿಜ್ಞಾನ ವಸಾಹತು ನಿರೂಪಣೆಯಿಂದ ವಿಕೃತವಾಗಿದೆ. ಇದರಿಂದ ಬಿಡುಗಡೆಗೊಳಿಸುವುದೇ ಇಲ್ಲಿನ ಸಂಶೋಧನೆಗಳ ಮುಖ್ಯ ಗುರಿ. ನಮ್ಮ ನಡುವಿನ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂಥ ಶಿಕ್ಷಣ ಮತ್ತು ಸಂಶೋಧನಾಕಾರ ರೂಪಿಸುವಲ್ಲಿ ಅಂತಾರಾಷ್ಟ್ರಿಯ ಮನ್ನಣೆ ಪಡೆಯುವತ್ತ ಸಾಗಿದೆ ಈ ಅಧ್ಯಯನ ಕೇಂದ್ರ. ಈ ಕೇಂದ್ರದ ಧ್ಯೇಯ ಗಮನ ಸೆಳೆಯುವಂತಿದೆ.
* ಜಾತಿ/ಅಸಮಾನತೆ, ಬಹುತ್ವ/ಸಂಘರ್ಷಗಳ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.
* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.
* ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರ್ಘಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.
* ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಳೀಯ ಸಾಂಸ್ಕೃತಿಕ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.
* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.
* ಸಾಮಾಜಿಕ ಹಾಗೂ ಸಾಸಂಕೃತಿಕ ಸಂಘರ್ಷಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.
*ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಸಮಸ್ಯೆಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎಂಬ ವಿಷಯದ ಕುರಿತು ಬೆಳಕು ಚೆಲ್ಲುವುದು.
ಸ್ಥಾನಿಕ ಸಮುದಾಯಗಳು, ಸ್ಥಾನಿಕ ಆಡಳಿತ ಟಕಗಳು, ಕಾನೂನನ್ನು ರೂಪಿಸುವವರು ಹಾಗೂ ಸರಕಾರೇತರ ಸಂಸ್ಥೆಗಳ ನಡುವೆ ಕೊಡುಕೊಳ್ಳುವಿಕೆಯ ಸಂಬಂಧವನ್ನೇರ್ಪಡಿಸುವುದು. ಹೀಗೆ ಇವರ ಸಂಶೋಧನೆ ಅಂದರೆ ಪುಸ್ತಕ ಬರೆಯುವುದರಲ್ಲಿ ಅದೊಂದು ಸಮಾಜಮುಖಿ ಕಾರ್ಯಕ್ರಮ.
ಇವರ ಸಂಶೋಧನೆ ಅಂದರೆ ಕೇವಲ ವಿಶ್ವವಿದ್ಯಾಲಯದ ಕೊಠಡಿಗಳಲ್ಲಿ ಮಾಡುವ ಅಧ್ಯಯನವಲ್ಲ. ಜನರ ಜೊತೆ ಸಮಾಜದ ಜೊತೆ ನಡೆಸುವ ಸಂವಹನ. ಹಾಗಾಗಿ ಇವರಿಗೆ ಜನರ ಜೊತೆ ಸಂವಾದ ಅನಿವಾರ್ಯ. ಜನರ ಅಹವಾಲುಗಳನ್ನು ಸ್ವೀಕರಿಸುತ್ತ ಅವಕ್ಕೆ ಉತ್ತರ ನೀಡುತ್ತ ಜನರಿಂದಲೂ ಕಲಿಯುತ್ತ ವಿಚಾರ ರೂಪಿಸಿಕೊಳ್ಳುತ್ತ ಬೆಳೆಯುವುದೇ ಇವರ ಸಂಶೋಧನಾ ಕ್ರಮ. ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ಜನರ ಜೊತೆ ನಡೆಸುವ ಸಂವಾದ ಇದು. ಇಲ್ಲಿ ಪರಸ್ಪರ ವಿಚಾರಗಳ ವಿನಿಮಯ ಹಾಗೂ ಅನುಭವಗಳ ಬಳಕೆಯಿಂದ ತಿಳುವಳಿಕೆ ಹೆಚ್ಚಲು ಸಾಧ್ಯ. ಈ ತಿಳುವಳಿಕೆ ಅವರವರ ನೆಮ್ಮದಿಗೆ ನಾಂದಿಯಾಗಬೇಕೆಂಬುದೇ ಇವರ ಬಯಕೆ. ನಿಜಕ್ಕೂ ಈ ಸಂಶೋಧನಾ ಕೇಂದ್ರ ದೇಶದಲ್ಲೇ ಅಪರೂಪದ್ದು.
ಇದನ್ನೆಲ್ಲ ಅರಿತಾಗ ನಾವೆಷ್ಟು ಬೌದ್ಧಿಕ ಬಡವರಾಗಿದ್ದೇವೆಂಬುದು ಗೊತ್ತಾಗುತ್ತದೆ. ನಮಗೆ ಸರಿಯಾದ ಓದಿನ ಕ್ರಮ ಗೊತ್ತಿಲ್ಲ. ತರ್ಕ ಉಪಯೋಗಿಸಿ ವಾದ ಬೆಳೆಸುವ ರೀತಿ ಗೊತ್ತಿಲ್ಲ. ನಮಗೊಂದು ನಿರ್ಧಿಷ್ಟ ಚಿಂತನಾಕ್ರಮ ಇಲ್ಲ. ಗೃಹಿಕೆಯ ಸೂಕ್ಷ್ಮತೆ ಇಲ್ಲ. ಹೀಗಿದ್ದಾಗ ನಾವು ಮಾಡುವ ಸಂಶೋಧನೆಗಿಗೆ ಕವಡೆ ಕಿಮ್ಮತ್ತು ಬರಲು ಸಾಧ್ಯವೇ? ಈ ಕಾರಣಕ್ಕಾಗೇ ಇಂದು ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನೆಗಲು ಗುಜರಿ ವ್ಯಾಪಾರವಾಗಿದೆ. ಇದು ಬದಲಾಗಬೇಕೆಂಬುದು ಬಾಲಗಂಗಾಧರ ಕನಸು. ವರ್ಷಕ್ಕೆರಡು ಸಾರಿ ಇವರೇ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ಬಂದು ಮಾರ್ಗದರ್ಶನ ನೀಡುತ್ತಾರೆ. ಬಾಲಗಂಗಾಧರರ ಹತ್ತಿರ ಸೈ ಅನಿಸಿಕೊಗಿಂಡು ಸಂಶೋಧನೆಗೆ ನೊಂದಣಿ ಮಾಡಿಕೊಳ್ಳುವುದೊಗಿಂದು ಹರಸಾಹಸ. ವರ್ಷಾನುಗಟ್ಟಲೇ ವಿದ್ಯಾರ್ಥಿಿಗಳ ಆಸಕ್ತಿಯನ್ನೇ ಒರೆಗೆ ಹಚ್ಚುತ್ತಾರೆ ಅವರು. ಸಂಶೋಧನಾ ವಿದ್ಯಾರ್ಥಿಗೆ ಬೇಕಾದ ಅರ್ಹತೆಗಳನ್ನೆಲ್ಲ ಪಡೆದುಕೊಂಡ ಮೇಲೆ ಅನುಮತಿ ನೀಡುತ್ತಾರೆ. ಆದ್ದರಿಂದ ಕೇವಲ ಉದ್ಯೋಗಾಕಾಂಕ್ಷೆಯಿಂದ ಸಂಶೋಧನೆಗೆ ಬರುವವರಿಗೆ ಇದು ಕಠಿಣ ಸ್ಥಳ.
ಕರ್ನಾಟಕದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಗುಣಾತ್ಮಕ ಸಂಶೋಧನೆ ನಡೆಸಲು ಹಲವಾರು ತೊಂದರೆ ಇದೆ. ಮೊದಲನೆಯದಾಗಿ ಭಾಷಾ ಸಮಸ್ಯೆ. ಕನ್ನಡದಲ್ಲಿ ಆಕರ ಗ್ರಂಥಗಳು ಸಿಗುವುದು ಕಷ್ಟ. ಹಾಗಾಗಿ ಭಾಷಾಂತರ ಕಾರ್ಯಕ್ರಮವು ಇವರ ಗುರಿಯಾಗಿದೆ. ಸಮಾಜ ವಿಜ್ಞಾನದ ಪಠ್ಯಗಳ ಕನ್ನಡಾನುವಾದ ಮಾಡುತ್ತಿದ್ದಾರೆ. ಜಾತಿ, ಅಸಮಾನತೆ, ಬಹುತ್ವ ಹಾಗೂ ಸಂಘರ್ಷಗಳ ಸಂಶೋಧನೆಗೆ ಸಂಬಂಧಿಸಿ ವಿಶೇಷವಾದ ಗ್ರಂಥಾಲಯವೊಂದನ್ನು ಬೆಳೆಸುತ್ತಿದ್ದಾರೆ. ಅದೂ ಅಲ್ಲದೇ ಈ ಕೇಂದ್ರ ಭಾರತದ ಸಮಾಜ ವಿಜ್ಞಾನಗಳನ್ನು ಕಾಡುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ.
1) ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಶಿಸ್ತು ಬಹುತೇಕ ಕಾಣೆಯಾಗಿದೆ.
2) ಸ್ಥಾನಿಕ ಸಮುದಾಯಗಳು ಹಾಗೂ ಸಮಾಜ ವಿಜ್ಞಾನದ ಸಿದ್ಧಾಂತಗಳ ನಡುವಿನ ಸಂಬಂಧ ಕಡಿದು ಹೋಗಿದೆ.
3) ಸಂಶೋಧನೆಗೆ ಅವಶ್ಯವಿರುವ ಸೂಕ್ತ ತರಬೇತಿಯ ಕೊರತೆಯಿದೆ.
4) ಸಂಶೋಧನೆಗೆ ಅಗತ್ಯವಿರುವ ಮಾಹಿತಿಗಳು ಸರಿಯಾಗಿ ಲಭ್ಯವಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಸಂಶೋಧಕರ ತಂಡವನ್ನು ಹುಟ್ಟುಹಾಕಿ ಅವರಿಗೆ ಅತ್ಯುತ್ತಮವಾದ ಸಂಶೋದನಾ ವಿಧಾನಗಳಲ್ಲಿ ತರಬೇತಿ ನೀಡಿ ಅವರನ್ನು ಸ್ಥಳೀಯ ಸಮಾಜಗಳ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸುವಂತೆ ಪ್ರೇರೇಪಿಸುವುದು ಈ ಕೇಂದ್ರದ ಬಹು ಮಹತ್ವದ ಉದ್ದೇಶ. ಶಿವಮೊಗ್ಗದ “ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ” ಎಲ್ಲ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಲಿ
ಸಂಸ್ಕೃತಿ ಸಂಕಥನ – ೫
ನೆಮ್ಮದಿಗೆ ನೂರೆಂಟು ಮಾರ್ಗ
- ರಮಾನಂದ ಐನಕೈ
ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.
ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.
ಪಾಶ್ಚಾತ್ಯರ ಸಾಮಾಜಿಕ ಭದ್ರತೆಯ ಕಲ್ಪನೆ ಹಾಗಿದ್ದದ್ದಕ್ಕೇ ಅವರಿಗೆ ಭಾರತ ಒಂದು ದರಿದ್ರ ದೇಶವಾಗಿ ಕಂಡುಬಂತು. ಇಲ್ಲಿ ಒಂದು ಸಾಮಾಜಿಕ ಭದ್ರತೆಯ ವ್ಯವಸ್ಥೆಯೇ ಇಲ್ಲವೆನಿಸಿತು ಅವರಿಗೆ. ಏಕೆಂದರೆ ಜನ ಹಸಿವಿನಿಂದ ಬಳಲುತ್ತಿದ್ದಾರೆ. ವಸತಿಗೆ ಸರಿಯಾದ ಸೂರಿಲ್ಲ, ನಿರುದ್ಯೋಗದ ತಾಂಡವ, ಅಶಿಕ್ಷಿತರ ಹಾವಳಿ – ಹೀಗೆ ಕೊಟ್ಯಂತರ ಜನ ದುರ್ಗತಿಯಲ್ಲಿರುವ ವಾಸ್ತವ ಅವರಿಗೆ ಪೂರಕ ಸಮರ್ಥನೆಯಾಯಿತು. ಇಲ್ಲಿಯ ಪ್ರಭುತ್ವ ಈ ಕುರಿತು ಚಿಂತಿಸಿಲ್ಲ. ಜನರನ್ನು ಮೌಢ್ಯ ಮತ್ತು ಶೋಷಣೆಯ ಕೂಪದಲ್ಲಿ ತಳ್ಳಿದೆ. ಆದ್ದರಿಂದ ಭಾರತೀಯರು ಅಸಂತೋಷದಲ್ಲಿದ್ದಾರೆಂಬ ತೀರ್ಮಾನ ನೀಡಿದರು. ಅಷ್ಟೇಅಲ್ಲ, ಇದೇ ಹಿನ್ನೆಲೆಯಲ್ಲಿ ಭಾರತೀಯರು ಅಸಂತೋಷದಲ್ದಿದ್ದಾರೆಂಬುದನ್ನು ತೋರಿಸಿಕೊಟ್ಟರು. ನಮಗೆ ಇದು ನಿಜ ಅನಿಸಿತು. ಇಡೀ ಪಾಶ್ಚಾತ್ಯ ಜಗತ್ತು ಆಧುನಿಕ ಶಿಸ್ತು ಮತ್ತು ಸವಲತ್ತುಗಳ ಮೂಲಕ ಸಂತೋಷದಲ್ಲಿದೆ. ನಾವು ಮಾತ್ರ ಅಸಂತೋಷದಲ್ಲಿದ್ದೇವೆಂದು ಮಾತನಾಡಿಕೊಳ್ಳತೊಡಗಿದೆವು.
ಭಾರತ ಸ್ವತಂತ್ರವಾದ ನಂತರ ನಮ್ಮ ಸಂವಿಧಾನ ಕೂಡ ಕಲ್ಯಾಣ ರಾಜ್ಯದ ಗುರಿಯನ್ನೇ ಕನಸಾಗಿಸಿಕೊಂಡಿತು. ಬಡವರ ಉದ್ದಾರ ಸರಕಾರದ ಘೋಷಣೆಯಾಯಿತು. ವಿವಿಧ ಯೋಜನೆಗಳು ಜಾರಿಗೆ ಬಂದವು. ಆದರೆ ನಾವಂದು ಕೊಂಡಂತೆ ಸ್ವತಂತ್ರ ಭಾರತದಲ್ಲಿ ಸಂತೋಷ ಹೆಚ್ಚಾಗುವುದರ ಬದಲು ಕಡಿಮೆಯಾಗುತ್ತ ಬಂದಿದೆ. ಸಮಸ್ಯೆಗಳು ಬಗೆಹರಿಯುವ ಬದಲು ಮುಂದುವರಿಯುತ್ತಲೇ ಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಅಥವಾ ವಸಾಹತು ಆಳ್ವಿಕೆ ಪೂರ್ವದಲ್ಲಿದ್ದ ಸಂತೋಷ ಮತ್ತು ನೆಮ್ಮದಿ ಇಂದು ನಮ್ಮಲ್ಲಿ ಇಲ್ಲವಾಗಿದೆ. ಕಾರಣ ಏನು? ಪಾಶ್ಚಾತ್ಯರು ಸದಾ ಸಂತೋಷದಲ್ಲಿದ್ದಾರೆ ಎಂಬ ನಮ್ಮ ಗ್ರಹಿಕೆ ನಿಜವೇ? ಅಥವಾ ಭಾರತೀಯರೆಲ್ಲ ಅಸಂತೋಷದಲ್ಲಿದ್ದಾರೆ ಎಂಬ ವಾಸ್ತವ ನಿಜವೇ? ಉತ್ತರ ಸರಳವಾಗಿದೆ. ಎರಡೂ ಅರ್ಧ ಸತ್ಯ.
ಆರ್ಥಿಕ ವಿಚಾರಗಳ ಮೇಲೆ ನಿಂತ ಸಾಮಾಜಿಕ ಭದ್ರತೆಯ ವ್ಯವಸ್ಥೆ ನೀರ ಮೇಲಿನ ಗುಳ್ಳೆ ಇದ್ದಂತೆ. ಅದು ಶಾಶ್ವತ ಅಲ್ಲ. ನೋಡಲಿಕ್ಕೆ ಚಂದ. ಅನಿರೀಕ್ಷಿತವಾಗಿ ಉಂಟಾಗುವ ಆರ್ಥಿಕ ಏರುಪೇರು ಇಂಥ ನೀರಗುಳ್ಳೆಗಳನ್ನೆಲ್ಲ ಛಿದ್ರವಾಗಿಸಿಬಿಡುತ್ತದೆ. ಆಗ ಜನರ ಸಂತೋಷದ ಕತೆಯೇನು? ಇದನ್ನು ಇಂದು ಪಾಶ್ಚಾತ್ಯ ದೇಶಗಳಲ್ಲಿ ಕಾಣಬಹುದು. ಅಮೇರಿಕದ ಆರ್ಥಿಕ ಹಿಂಜರಿತದ ಜ್ವಲಂತ ಉದಾಹರಣೆ ನಮ್ಮೆದುರಿಗೆ ಇದೆ. ಅಲ್ಲಿನ ಜನ ಇಂದು ನಿರುದ್ಯೋಗ ಹಾಗೂ ಆರ್ಥಿಕ ಅಭದ್ರತೆಯಿಂದ ಕಂಗಾಲಾಗಿದ್ದಾರೆ. ಇಂಥ ಸಾಮಾಜಿಕ ಭದ್ರತೆಗೆ ಅರ್ಥ ಇದೆಯೇ?
ಸಾಮಾಜಿಕ ಭದ್ರತೆಯ ಕಲ್ಪನೆಯನ್ನು ಆರ್ಥಿಕ ಮಾಪನದ ಮೂಲಕ ಕಟ್ಟಲ್ಪಟ್ಟ ಯಾವ ದೇಶದಲ್ಲೂ ಪ್ರಜೆಗಳು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಗೊತ್ತಿಲ್ಲದೇ ತಾರತಮ್ಯ ನೀತಿ ನುಸುಳುತ್ತದೆ. ಆರ್ಥಿಕ ಸಮತೋಲನ ಕಾಪಾಡಲು ದೇಶೀಯರು-ವಿದೇಶೀಯರು ಎಂಬ ಪಕ್ಷಪಾತ ಬರುತ್ತದೆ. ಇದು ಮತ್ತೊಂದು ರೀತಿಯ ವೈಷಮ್ಯಕ್ಕೆ ಕಾರಣವಾಗುತ್ತದೆ. ಭೌತಿಕ ಸ್ಥಿತಿ-ಗತಿಯೇ ನೆಮ್ಮದಿಯೆಂದು ನಂಬಿದ ಜನ ನಿತ್ಯ ಆತಂಕದಲ್ಲಿರುತ್ತಾರೆ. ದೇಶದಲ್ಲಿ ನಡೆಯುವ ಚಿಕ್ಕ ತಲ್ಲಣ ಕೂಡ ಅವರನ್ನು ಬೆಚ್ಚಿಬೀಳಿಸುತ್ತದೆ. ಜೀವನದ ಪ್ರತಿ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಎತ್ತಿಡುವ ಅನಿವಾರ್ಯತೆ ಎದುರಾಗಿ ಜೀವನದ ಸಹಜತೆ ನಾಶವಾಗುತ್ತದೆ. ಇದನ್ನು ಸಂತೋಷ ಅನ್ನೋಣವೇ?
ಸರಕಾರ ಪ್ರಜೆಗಳಿಗೆ ಸಂತೋಷ ನೀಡಬಹುದು ಎಂಬ ವಾದವೇ ಅವಾಸ್ತವಿಕ. ಯೋಜನೆಗಳ ಮೂಲಕ ಯಾವುದೇ ಭದ್ರತೆ ನೀಡಲು ಪ್ರಯತ್ನಿಸಿದರೆ ಅದು ಅಂತ್ಯವಿಲ್ಲದ ಆಸೆಯಾಗುತ್ತದೆಯೇ ವಿನಾ ಖಂಡಿತ ಸಂತೋಷಕ್ಕೆ ನಾಂದಿಯಾಗಲಾರದು. ಹಾಗಾಗಿ ಇಂತಹ ಸಾಮಾಜಿಕ ಭದ್ರತೆ ಒಂದು ಅಪೂರ್ಣ ಫಲಿತಾಂಶವೇ ಹೊರತು ಅಂತಿಮ ಸತ್ಯ ಅಲ್ಲ. ಪಾಶ್ಚಾತ್ಯರ ಸಾಮಾಜಿಕ ಭದ್ರತೆ ವ್ಯವಸ್ಥೆಯೆಂಬುದು ಒಂದು ಚಿಂತನೆ. ಅದಕ್ಕೆ ಅವರು ಬೇಕಾದಷ್ಟು ವೈಜ್ಞಾನಿಕ ಸಮರ್ಥನೆ ನೀಡಬಹುದು. ಅಂದಾಕ್ಷಣ ಅದು ಶ್ರೇಷ್ಠ, ನಮ್ಮದೆಲ್ಲ ನಿರುಪಯುಕ್ತ ಎಂಬ ತೀರ್ಮಾನಕ್ಕೆ ಬರಬೇಕಾಗಿಲ್ಲ. ಅದರಿಂದ ಸಿಗಬಹುದಾದ ಸಂತೋಷವನ್ನು ಅನುಭವದಿಂದ ಅಳೆದು ನೋಡಬೇಕಾಗುತ್ತದೆ. ಆಗ ನಾವು ಈ ಭದ್ರತೆ ಅನ್ನುವುದನ್ನು ಸೂಕ್ಷ್ಮವಾಗಿ ಅರಿಯಬೇಕಾಗುತ್ತದೆ.
‘ಭದ್ರತೆ’ ಅಂದರೆ ಏನು? ಇದು ಮನುಷ್ಯನಿಗೆ ಸಂಬಂಧಪಟ್ಟ ಧೈರ್ಯ. ಈ ಭದ್ರತೆ ಅನುಭವಿಸಲು ತಿಳುವಳಿಕೆ ಬೇಕೆಂದೇನೂ ಇಲ್ಲ. ಅದು ಅನುಭವಕ್ಕೆ ಸಂಬಂಧಪಟ್ಟ ಸಂಗತಿ. ಅನುಭವಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರಿಂದ ಯಾವುದೋ ಒಂದು ಸಿದ್ಧ ಸೂತ್ರದ ಮೂಲಕ ವ್ಯಕ್ತಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಇದು ಅರ್ಥವಾಗದೇ ಯಾವುದೇ ಪ್ರಭುತ್ವ ಸಾಮಾಜಿಕ ಭದ್ರತೆ ನೀಡಲು ಸಾಧ್ಯವಿಲ್ಲ. ಆಥರ್ಿಕತೆಯ ಮೂಲಕ ನಾವು ನೀಡಬಹುದಾದದ್ದು ಸವಲತ್ತನ್ನೇ ವಿನಾ ಭದ್ರತೆಯನ್ನಲ್ಲ. ಪುಟ್ಟ ಮಗುವಿಗೆ ಈ ಪ್ರಪಂಚದ ಕುರಿತು ಏನೂ ತಿಳುವಳಿಕೆ ಇರಲಾರದು. ಆದರೂ ತಾಯಿಯ ಮಡಿಲು ಭದ್ರ ಅನಿಸುತ್ತದೆ. ತಾಯಿಯನ್ನು ಅಪ್ಪಿ ಹಿಡಿಯುವಲ್ಲೇ ಮಗುವಿಗೆ ಭದ್ರತೆಯ ಅನುಭವವಾಗುತ್ತದೆ. ಇಲ್ಲಿಯ ಸೂಕ್ಷ್ಮ ಗಮನಿಸಿ, ಭದ್ರತೆ ಅನ್ನುವುದು ಮಗು ಕಂಡುಕೊಳ್ಳುವುದೇ ವಿನಾ ತಾಯಿ ನೀಡುವುದಲ್ಲ. ಅದರಂತೆ ಸಾಮಾಜಿಕ ಭದ್ರತೆ ಕೂಡ. ಪ್ರಜೆಗಳು ಅದನ್ನು ಕಂಡುಕೊಳ್ಳಬೇಕು. ಅದಕ್ಕೆ ತಕ್ಕುದಾದ ವಾತಾವರಣ ಕಲ್ಪಿಸುವುದು ಅಥವಾ ಮಾರ್ಗ ತೋರಿಸುವುದಷ್ಟೇ ಪ್ರಭುತ್ವದ ಕೆಲಸ. ಹೀಗಾದಾಗ ಮಾರ್ಗ ಹುಡುಕುವ ಕ್ರಿಯೆಯಲ್ಲೇ ಮನುಷ್ಯ ನೆಮ್ಮದಿಯಿಂದಿರುತ್ತಾನೆ.
ಈಗ ಮೂಲ ವಿಷಯಕ್ಕೆ ಬರುವ. ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಸುಮ್ಮನೇ ಗೊಡ್ಡು ಕಂದಾಚಾರಗಳ ಮೂಲಕ ಮಾತ್ರ ಬೆಳೆದು ಬಂದಿದೆಯೇ? ಅದು ನಿಜವಾದರೆ ಈ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಹೇಗೆ ಸಾಧ್ಯವಾಯಿತು? ಈ ದೇಶದಲ್ಲಿ ಆಗಿಹೋದ ಮಹಾತ್ಮರೆಲ್ಲ ಏನೂ ಮಾಡದೇ ಸುಮ್ಮನೇ ಕಾಲ ಕಳೆದರೇ? ಈ ಗೊಡ್ಡು ಸಂಸ್ಕೃತಿಯ ಕುರಿತು ಪಾಶ್ಚಾತ್ಯರಿಗೆ ಯಾಕಿಷ್ಟು ಕುತೂಹಲ? ನಮ್ಮ ಆಧುನಿಕ ಚಿಂತಕರ ಪ್ರಕಾರ ಇಂಗ್ಲೀಶರು ಬಂದಮೇಲೆ ನಿಜವಾದ ಪ್ರಗತಿ ಆಯಿತು. ಹಾಗಾದರೆ ಅದಕ್ಕೂ ಪೂರ್ವದಲ್ಲಿ ಭಾರತದಲ್ಲಿ ಏನೂ ಆಗಿಲ್ಲವೇ? ಆಗಿನ ಜನಕ್ಕೆ ನೆಮ್ಮದಿ ಎಂಬ ಕಲ್ಪನೆಯೇ ಇರಲಿಲ್ಲವೇ? ಇವನ್ನೆಲ್ಲ ಚಚರ್ೆ ಮಾಡುತ್ತ ಕುಳಿತರೆ ಪ್ರಯೋಜನವಿಲ್ಲ. ಮೊದಲು ನಮ್ಮ ಕುರಿತಾಗಿ ನಮ್ಮ ದೃಷ್ಟಿಕೋನವನ್ನು ಸರಿಪಡಿಸಿಕೊಳ್ಳಬೇಕು. ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎಂಬಂತೆ ನಾವು ನಮ್ಮಲ್ಲಿ ಇಲ್ಲದ್ದನ್ನು ಹುಡುಕುವ ಹರಸಾಹಸ ಮಾಡುತ್ತೇವೆ. ಇದ್ದದ್ದನು ಅರ್ಥಹೀನ ಎಂದು ನಿರ್ಣಯಿಸಿಬಿಡುತ್ತೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಇಲ್ಲದೇ ಇದ್ದದ್ದನ್ನು ಇದೇ ಎಂದು ಹುಡುಕುವ ಎಲ್ಲ ಜನರ ಸಮಸ್ಯೆ ಇದು. ಹಾಗಾಗಿ ಸಂತೋಷ ಹಾಗೂ ನೆಮ್ಮದಿ ಬೇಕು ಅಂದರೆ ಇದ್ದದ್ದನ್ನು ಹುಡುಕಬೇಕು.
ಪ್ರಾಧ್ಯಾಪಕ ಬಾಲಗಂಗಾಧರರು ಈ ಹುಡುಕಾಟ ಮಾಡಿ ನಮ್ಮಲ್ಲಿದ್ದ ಮಹತ್ವವೊಂದನ್ನು ಕಂಡುಕೊಂಡಿದ್ದಾರೆ. ಮೂರು ಸಾವಿರ ವರ್ಷಗಳಿಂದ ಭಾರತೀಯರು ಸುಮ್ಮನೆ ಮೂಢರ ಹಾಗೆ ಕುಳಿತಿಲ್ಲ. ಒಂದು ಅದ್ಭುತವಾದ ಸಮಾಜ ವಿಜ್ಞಾನವನ್ನು ಕಟ್ಟಿದ್ದಾರೆ. ಅದೇ ‘ಆಧ್ಯಾತ್ಮ’. ಮನುಷ್ಯನಿಗೆ ನೆಮ್ಮದಿ, ಶಾಂತಿ, ಆನಂದ ಹಾಗೂ ಸಂತೋಷ ನೀಡಬಹುದಾದ ಏಕೈಕ ಜೀವನ್ಮುಖಿ ವಿಜ್ಞಾನ ಅಂದರೆ ಆಧ್ಯಾತ್ಮ. ಇದು ಐರೋಪ್ಯರ ಸೊತ್ತಲ್ಲ. ನಮ್ಮ ಪೂರ್ವಜರು ಕಂಡುಹಿಡಿದಿದ್ದು. ಈ ಅಧ್ಯಾತ್ಮವೇ ನಮ್ಮಲ್ಲಿನ ಸಾಮಾಜಿಕ ಭದ್ರತಾ ವ್ಯವಸ್ಥೆ! ಆಧ್ಯಾತ್ಮ ಮಾತ್ರ ಎಲ್ಲ ಮನುಷ್ಯರಿಗೆ ಆನಂದ ಪಡೆಯುವ ಸಮಾನವಾದ ಅವಕಾಶ ಸೃಷ್ಟಿಸಿಕೊಡುತ್ತದೆ.
ಮನುಷ್ಯನಿಗೆ ಅಂತಿವಾಗಿ ಬೇಕಾದದ್ದು ಆನಂದ ಅಥವಾ ನೆಮ್ಮದಿ. ಆನಂದದಲ್ಲಿ ಮಾತ್ರ ನಾವು ಭದ್ರತೆಯ ಭಾವನೆ ಕಾಣಲು ಸಾಧ್ಯ. ಈ ಆನಂದ ಅಥವಾ ನೆಮ್ಮದಿ ಅನ್ನುವುದು ಮನಸ್ಸಿನೊಳಗೆ ಆಕಾರ ಪಡೆಯುವಂತಹದ್ದು. ಆನಂದ ಹೇಗಿರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಅದು ಅನುಭವಕ್ಕೆ ಬರುತ್ತದೆ. ಆನಂದ ಇಂತದ್ದರಲ್ಲೇ ಸಿಗುತ್ತದೆ ಎಂದು ನಿರ್ಧಿಷ್ಟವಾಗಿ ಹೇಳುವ ಹಾಗಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಆನಂದ ಸಿಗುವುದಲ್ಲ, ನಾವು ಪಡೆದುಕೊಳ್ಳುವುದು.
ನಮ್ಮ ಸಂಸ್ಕೃತಿ ಅಥವಾ ಆಧ್ಯಾತ್ಮ ಈ ಆನಂದವನ್ನು ಪಡೆದುಕೊಳ್ಳಲು ಸಾವಿರಾರು ಮಾರ್ಗವನ್ನು ತೋರಿಸಿಕೊಟ್ಟಿದೆ. ಬಡವ-ಶ್ರೀಮಂತ, ಹಿರಿಯ-ಕಿರಿಯ, ದಡ್ಡ-ಬುದ್ಧಿವಂತ ಹೀಗೆ ಯಾವ ತಾರತಮ್ಯವಿಲ್ಲದೆ ಎಲ್ಲರೂ ಆನಂದವನ್ನು ಪಡೆಯಬಹುದು. ಪ್ರತಿಯೊಬ್ಬನೂ ಆನಂದ ಪಡೆಯಲು ತನಗೆ ಯೋಗ್ಯವಾದ ಮಾರ್ಗವನ್ನು ಆಯ್ದುಕೊಳ್ಳಬಹುದು. ಭಾರತೀಯ ಸಂಸ್ಕೃತಿಯ ರಹಸ್ಯವೇ ಇದು. ಪೂಜೆ, ಯಾತ್ರೆ, ಧ್ಯಾನ, ತಪಸ್ಸು, ಯೋಗ, ಕೃಷಿ ಹೀಗೆ ನೂರಾರು ಮಾರ್ಗಗಳ ಮೂಲಕ ನಾವು ಆನಂದ ಪಡೆಯಬಹುದು. ಆಧ್ಯಾತ್ಮ ಸರ್ವರಿಗೂ ಸರಳ ಮಾರ್ಗ ತೋರಿಸುತ್ತದೆ. ಇದರ ಹೊರತಾಗಿ ಆನಂದವನ್ನು ಆರ್ಥಿಕ ತಳಹದಿಯ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಕೇವಲ ಎರಡು ಪ್ರಶ್ನೆಗಳು ಸಾಕು.
1. ಈ ಭೂಮಿಯ ಮೇಲಿದ್ದ ಶ್ರೀಮಂತರೆಲ್ಲ ಸಂತೋಷದಲ್ಲಿ ಇದ್ದಾರಾ?
2. ಈ ಭೂಮಿಯ ಮೇಲಿದ್ದ ಬಡವರೆಲ್ಲ ಅಸಂತೋಷದಲ್ಲಿ ಇದ್ದಾರಾ?
‘ಇಲ್ಲ’ ಎಂಬುದೇ ಎರಡಕ್ಕೂ ಉತ್ತರ. ಆಧ್ಯಾತ್ಮ ಮಾತ್ರ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬಲ್ಲದು. ನಾವು ಆನಂದವನ್ನು ಪಡೆಯಲು ಪ್ರಯತ್ನಿಸುತ್ತೇವೆಯೇ ವಿನಾ ಪ್ರಭುತ್ವ ಅದನ್ನು ನೀಡಲೀ ಎಂದು ಬಯಸುವುದಿಲ್ಲ. ಇದೇ ಆಧ್ಯಾತ್ಮ. ಭೂಮಿಯ ಮೇಲೆ ಇದಕ್ಕಿಂತ ದೊಡ್ಡ ಸಾಮಾಜಿಕ ಭದ್ರತಾ ವ್ಯವಸ್ಥೆ ಎಲ್ಲಿ ಸಿಗುತ್ತದೆ?
ನಮ್ಮ ಆಧ್ಯಾತ್ಮ ಎನ್ನುವುದು ಅನುಭವಗಳ ಮೂಲಕ ಕಟ್ಟಲ್ಪಡುತ್ತಾ ಬಂದದ್ದು. ಇದರ ಹಿಂದೆ ಯಾವುದೇ ಥಿಯಾಲಜಿ ಇಲ್ಲ. ಪ್ರಜ್ಞಾಪೂರ್ವಕವಾಗಿ ಹೆಣೆಯಲ್ಪಟ್ಟ ನೆಮ್ಮದಿಯ ಸೂತ್ರಗಳಲ್ಲ ಅಥವಾ ಪಠ್ಯಪುಸ್ತಕಗಳ ಮೂಲಕ ಬೋಧಿಸಲ್ಪಡುವ ವಿಷಯವೂ ಅಲ್ಲ. ನಮ್ಮಲ್ಲಿ ಒಂದು ಗಾದೆ ಮಾತಿಗೆ ‘ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸಿ ಕೊಡುವುದು’ ಜಾಣತನ ಎಂದು. ನೆಮ್ಮದಿಯನ್ನು ಕೊಡುತ್ತೇವೆಂಬ ಸಾಹಸ ಕೈಬಿಟ್ಟು ನೆಮ್ಮದಿ ಗಳಿಸಿಕೊಳ್ಳುವ ಮಾರ್ಗ ತೋರಿಸಿ ಕೊಡಬೇಕು. ನಮ್ಮ ಆಧ್ಯಾತ್ಮ ಈ ಮಾರ್ಗ ತೋರಿಸುವ ಕೆಲಸ ಮಾಡುತ್ತ ಬಂದಿದೆ. ಒಬ್ಬನಿಗೆ ನೆಲದ ಮೇಲೆ ಇನ್ನೊಬ್ಬನಿಗೆ ಸೋಪಾನದ ಮೇಲೆ ಮಲಗಿದರೆ ಆನಂದ ಸಿಗುತ್ತದೆ. ಒಬ್ಬನಿಗೆ ಗಣೇಶನ ಪೂಜೆಯಲ್ಲಿ, ಇನ್ನೊಬ್ಬನಿಗೆ ಹನುಮಂತನ ಪೂಜೆಯಲ್ಲಿ ಆನಂದ ಸಿಗುತ್ತದೆ. ಇವರ ಆನಂದದ ಮಾರ್ಗಕ್ಕೆ ಯಾವುದೇ ನಿರ್ಬಂಧ ಇಲ್ಲ.
ನೆಮ್ಮದಿ ಮತ್ತು ಆನಂದ ಅನ್ನುವುದು ಒಂದು ಮಾನಸಿಕ ಅವಸ್ಥೆ. ಅದನ್ನು ಭೌತಿಕ ಸಂಗತಿಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ದುರಂತದ ಸಂಗತಿ ಅಂದರೆ ಇದನ್ನು ಕೂಡಾ ನಮಗಿಂತ ಮೊದಲು ಪಾಶ್ಚಾತ್ಯರೇ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕಾಗೇ ಅವರಿಗೀಗ ಭಾರತೀಯರ ಜೀವನಶೈಲಿ ಆದರ್ಶವಾಗಿ ಕಾಣುತ್ತದೆ. ಇಲ್ಲಿಯ ಯೋಗ ಮತ್ತು ಧ್ಯಾನವನ್ನು ವಿಜ್ಞಾನ ಎಂದು ಸ್ವೀಕರಿಸುತ್ತಾರೆ. ಆಯುರ್ವೇದ ವೈದ್ಯಕೀಯ ಪದ್ಧತಿಗೆ ಆಕರ್ಷಿತವಾಗುತ್ತಾರೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಪ್ರಶಂಸಿಸುತ್ತಾರೆ. ಏಕೆಂದರೆ ಅವರಿಗೂ ತಿಳಿಯುತ್ತ ಬಂದಿದೆ, ಇವುಗಳಲ್ಲಿ ನೆಮ್ಮದಿಯ ಮಾರ್ಗಗಳಿವೆಯೆಂದು. ಆದ್ದರಿಂದ ಪ್ರಪಂಚದ ಯಾವ ತಲ್ಲಣಗಳಿಗೂ ವಿಚಲಿತವಾಗದ ಒಂದು ಅದ್ಭುತವಾದ ಸಾಮಾಜಿಕ ಭದ್ರತೆಯ ವ್ಯವಸ್ಥೆ ಅಂದರೆ ನಮ್ಮ ಸಂಸ್ಕೃತಿ. ಇದನ್ನು ಪುನಃ ಪಾಶ್ಚಾತ್ಯರೇ ಬಂದು ತಿಳಿಸಿಕೊಡುವ ಪ್ರಸಂಗ ಬರುವಷ್ಟರಲ್ಲಿ ನಾವು ನಾವಾಗೇ ಅದನ್ನು ಅರಿತುಕೊಂಡರೆ ದೇಶಕ್ಕೆ ಒಳಿತು. *
ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು
ಡಾ. ರಾಜಾರಾಮ ಹೆಗಡೆ
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.
ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ ಅದೊಂದು ಅಪಾಯಕಾರಿ ಗ್ರಂಥವಾಗಿದೆ. ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.
ಈ ನಡುವೆ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ. ಒಂದೊಮ್ಮೆ ಅದು ಹಿಂದೂ ಸಂಸ್ಕೃತಿಯ ಉದ್ಧಾರಕ್ಕೆ ಸಹಕರಿಸುತ್ತದೆ ಎಂಬುದಾಗಿ ಅವರು ನಂಬಿಕೊಂಡಿದ್ದರೂ ಕೂಡ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುತ್ತಿದ್ದಾರೆಯೇ ಹೊರತೂ ಆಧುನಿಕ ಪರಿಭಾಷೆಯಲ್ಲಿ ಮಾತನಾಡುತ್ತಿಲ್ಲ. ನಮಗೆ ತಿಳಿದುಬರುವುದೇನೆಂದರೆ ಅವರ ಕಾರ್ಯಕ್ರಮದಲ್ಲಿ ಎಲ್ಲಾ ಹಿನ್ನೆಲೆಯ ಮಕ್ಕಳೂ ಭಾಗವಹಿಸಿದ್ದಾರೆ ಹಾಗೂ ಅವರಾಗಲೀ ಅವರ ಪಾಲಕರಾಗಲೀ ಈ ಕಾರ್ಯಕ್ರಮದ ಕುರಿತು ವಿರೋಧವನ್ನು ವ್ಯಕ್ತಪಡಿಸಿಲ್ಲ.
ಭಗವದ್ಗೀತಾ ಅಭಿಯಾನವನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್ ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮೀಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಚರ್ (Scripture) ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.
ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಚರ್ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ. ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್ವಾದಿಗಳಿಬ್ಬರೂ ಇದ್ದಾರೆ.
ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ ಹೊಸ ಪಟ್ಟವನ್ನು ಕಟ್ಟಿ ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳುವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂರ್ತಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂ ಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ. ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.
ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ದಲಿತ ಹಾಗೂ ಪ್ರಗತಿಪರ ಚಿಂತಕರಲ್ಲಿ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ 60ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಫ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಫ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ್ಲ.
ಇನ್ನು ದಿನೇಶ್ ಅಮೀನ್ಮಟ್ಟು ಅವರು ದಿನಾಂಕ 18-7-2011ರ ಪ್ರಜಾವಾಣಿಯಲ್ಲಿ ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯನ್ನು ಸೇರಿಸಿದ್ದಾರೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿರ್ದೇಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇತಿಹಾಸಕಾರರು ಈಗಾಗಲೇ ಕಸದಬುಟ್ಟಿಗೆಸೆದಿರುವ ಈ ಚರ್ಚೆಯನ್ನು ದಿನೇಶ್ ಅಮೀನ್ಮಟ್ಟು ಅವರಿನ್ನೂ ಇತಿಹಾಸ ಎಂಬುದಾಗಿ ನಂಬಿಕೊಂಡಿರುವುದೇ ಆಶ್ಚರ್ಯ.
ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು 1) ಅದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬ ಪೂರ್ವಗೃಹೀತದಿಂದ ಹಾಗೂ 2) ಅದು ಜಾತಿ/ಜನಾಂಗ ಸಂಘರ್ಷದ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.
ಸ್ವರ್ಣವಲ್ಲಿ ಶ್ರೀಗಳು ಅಮೀನ್ಮಟ್ಟು ಅವರ ಹೊಸ ನಿರೂಪಣೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡುವುದಕ್ಕೂ ಮೊದಲು ಈ ಮೇಲಿನ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಬಹು ಸಂಸ್ಕೃತಿಗಳನ್ನು ಸಾಮರಸ್ಯದಿಂದ ಪಾಲಿಸಬೇಕೆನ್ನುವ ಉದ್ದೇಶವನ್ನೊಳಗೊಂಡ ನಮ್ಮ ಸೆಕ್ಯುಲರ್ ರಾಷ್ಟ್ರದ ಆಶಯಕ್ಕೆ ಭಗವದ್ಗೀತಾ ಅಭಿಯಾನಕ್ಕಿಂತ ಇಂಥ ನಿರೂಪಣೆಗಳೇ ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಇತಿಹಾಸಗಳನ್ನು ಕಟ್ಟಿ ಅವುಗಳನ್ನು ನಮ್ಮ ಮಠಾಧಿಪತಿಗಳು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅದು ಅರ್ಥವಾಗುವುದಿಲ್ಲ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.
ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು. ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.
ಭಗವದ್ಗೀತೆಯಂಥ ಗ್ರಂಥಗಳ ಕುರಿತು ಇಂದು ಇರುವ ಮೇಲಿನ ಚರ್ಚೆಗಳು, ಹೋರಾಟಗಳು ಏನನ್ನು ದೃಷ್ಟಾಂತಪಡಿಸುತ್ತವೆ? ನಮ್ಮ ಸಂಸ್ಕತಿಯಲ್ಲಿ ಅದರ ಸ್ಥಾನಮಾನವೇನು ಹಾಗೂ ಅದರ ಜೊತೆಗೆ ವ್ಯಕ್ತಿಯೊಬ್ಬನು ಯಾವ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕೆಂಬುದೇ ನಮಗೆ ಮರೆತುಹೋಗಿದೆ. ಬದಲಾಗಿ ಅದನ್ನೊಂದು ಹಿಂದೂ ರಿಲಿಜಿಯಸ್ ಸ್ಕ್ರಿಪ್ಚರ್ಎಂದೋ ಅಥವಾ ಆರ್ಯ-ಬ್ರಾಹ್ಮಣರ ಮ್ಯಾನಿಫೆಸ್ಟೋ ಅಥವಾ ಇತಿಹಾಸ ಎಂದೋ ಭಾವಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯವಾಗಿದೆ. ಹಿಂದಿನ ಅನೇಕ ತಲೆಮಾರುಗಳ ಅನೇಕ ವ್ಯಕ್ತಿಗಳಿಗೆ ಅದೊಂದು ಜೀವನ ಕಲಿಕೆಯ ಆಕರವಾಗಿದ್ದುದಂತೂ ಹೌದು. ಒಂದು ಸಂಗೀತ ಪುಸ್ತಕದಂತೆ ಆಧ್ಯಾತ್ಮವಿದ್ಯೆಯ ಪುಸ್ತಕವಾಗಿ ಅದು ಸಹಕರಿಸಬಲ್ಲದು ಎಂಬುದಾಗಿ ಸಂಪ್ರದಾಯಸ್ಥರು ಭಾವಿಸಿದ್ದಾರೆ. ಸ್ವರ್ನವಲ್ಲಿ ಶ್ರೀಗಳು ಭಗವದ್ಗೀತೆಯ ಈ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ವಿಧ್ಯಾರ್ಥಿಗಳಿಗೆ ಆ ಗ್ರಂಥದ ಕುರಿತು ಆಸಕ್ತಿ ಮೂಡಿಸುವ ಆದರ್ಶವನ್ನಿಟ್ಟುಕೊಂಡಿದ್ದಾರೆ ಎಂಬುದು ಅವರ ಪ್ರಚಾರ ಟಿಪ್ಪಣಿಗಳನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯ ಧುರೀಣರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಬೇರೆಯದೇ ರಾಜಕೀಯ ಕಾರಣಗಳಿವೆ ಎಂಬುದು ಸ್ಪಷ್ಟ. ಆದರೆ ಪ್ರಜ್ಞಾವಂತರು ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಕೂಡ ಗಮನಿಸಬೇಕು. ಇಂಥ ಸ್ವಾಮಿಗಳೆಲ್ಲ ಸತತ ಅಧ್ಯಯನಶೀಲರಾಗಿರುತ್ತಾರೆ. ಅವರಿಗೂ ನಮ್ಮಲ್ಲಿ ಅನೇಕರಂತೆ ಸಮಾಜದ ಕುರಿತು ಕಾಳಜಿಗಳಿವೆ ಹಾಗೂ ಸ್ವಂತ ನಿಲುವುಗಳಿವೆ.
ನಾವು ನಿಜವಾಗಿ ಜ್ಞಾನಾಸಕ್ತರೇ ಆಗಿದ್ದಲ್ಲಿ ಇಂಥ ಸಾಂಪ್ರದಾಯಿಕ ವಿದ್ವಾಂಸರ ಜೊತೆಗೆ ಹೇಗೆ ಸಂವಾದವನ್ನು ಏರ್ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ. ಹಾಗೂ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದಿದ್ದೇ ಹೌದಾದರೆ ಸೆಕ್ಯುಲರಿಸಂನ ಸ್ವರೂಪವನ್ನು ಮೊದಲು ತಿಳಿದುಕೊಳ್ಳೋಣ.
ಸಂಪ್ರದಾಯಗಳ ಸುತ್ತ
ಸಂಸ್ಕೃತಿ ಸಂಕಥನ – ೩
ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ. ಹಾಗಂತ ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುಉವದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ? ಅಥವಾ ಅರ್ಥ ಹುಡುಕುವ ಹಠವಾದರೂ ಏಕೆ? ಇವುಗಳಿಗೆಲ್ಲ ಅರ್ಥ ಇರಲೇಬೇಕೆಂದಿದೆಯೇ? ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ.
ಸಂಪ್ರದಾಯ ಅಂದರೆ ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆಗಳು. ನಮ್ಮ ಹಿರಿಯರು ಅವರ ಹಿರಿಯರನ್ನು ಅನುಕರಿಸಿದರು. ಅವರ ಹಿರಿಯರು ಅವರ ಹಿರಿಯರನ್ನು… ಹೀಗೆ ಯಾಕೆ ಆಚರಿಸಬೇಕೆಂದು ಯಾರೂ ಯಾರನ್ನೂ ಪ್ರಸ್ನಿಸಲಿಲ್ಲ. ಪ್ರಶ್ನಿಸುವ ಜಿಜ್ಞಾಸ ಹುಟ್ಟಲೇ ಇಲ್ಲ. ಏಕೆಂದರೆ ಎಲ್ಲರೂ ಅದು ತಮ್ಮದು ಎಂದು ನಂಬಿದ್ದರು. ಪ್ರೀತಿಸುತ್ತಿದ್ದರು. ಸ್ವಾತಂತ್ರ್ಯಾನಂತರ ನಮಗೆ ಸಂಪ್ರದಾಯಗಳ ಕುರಿತು ಹೆಚ್ಚು ಪ್ರಶ್ನೆಗಳು ಏಳಲು ಶುರುವಾಗಿವೆ. ಅದಕ್ಕೆ ಕಾರಣ ನಾವು ಪ್ರಭಾವಿಸಿಕೊಂಡ ಎರವಲು ವೈಚಾರಿಕತೆ ಅಥವಾ ವಿಚಾರವಾದ. ಅದು ನಮ್ಮ ಶಿಕ್ಷಣ ಹಾಗೂ ಓದುತ್ತಿರುವ ಸಮಾಜವಿಜ್ಞಾನಗಳಿಂದ ಸೃಷ್ಟಿಯಾದದ್ದು. ಪರೋಕ್ಷವಾಗಿ ಹೇಳಬಹುದಾದರೆ ಪಾಶ್ಚಾತ್ಯರು ಹೇಳಿಕೊಟ್ಟ ಕಂಠಪಾಠ. ಅವರ ಪ್ರಕಾರ ವೈಚಾರಿಕತೆಯತ್ತ ಸಾಗುವುದೇ ಪ್ರಗತಿ ಅಥವಾ ನಾಗರಿಕತೆಯ ಲಕ್ಷಣ. ಭಾರತೀಯ ಸಂಪ್ರದಾಯಗಳು (ಹಿಂದೂ ರಿಲಿಜನ್) ಅವೈಚಾರಿಕವಾದ್ದರಿಂದ ಭಾರತ ಹಿಂದುಳಿದ ದೇಶ. ಇಲ್ಲಿಯ ಜನ ಮೂಢರು ಮತ್ತು ದಡ್ಡರು. ಅರ್ಥವಿಲ್ಲದ ಆಚರಣೆಗಳನ್ನು ಮಾಡುವವರು ಎಂಬಿತ್ಯಾದಿ. ಇದೇ ನಿಜ ಎಂದು ನಾವೆಲ್ಲ ನಂಬಿಕೊಂಡಿದ್ದರಿಂದ ನಮ್ಮ ಸಂಪ್ರದಾಯಗಳು ನಮಗೆ ಅರ್ಥಹೀನ ಅನಿಸುತ್ತದೆ.
ದುರಂತ ಅಂದರೆ ಭಾರತದಲ್ಲೀಗ ಎರಡು ಪಂಗಡಗಳಾಗಿವೆ. ಪ್ರಗತಿಪರರು ಮತ್ತು ಪ್ರತಿಗಾಮಿಗಳು.ಇಲ್ಲಿ ಸಂಪ್ರದಾಯವನ್ನು ಪ್ರಶ್ನಿಸುವವರು ಹಾಗೂ ವಿರೋಧಿಸುವವರು ಪ್ರಗತಿಪರರು.ಬಹಳಷ್ಟು ಪ್ರಗತಿಪರರಿಗೆ ಇದೊಂದೇ ಬಂಡವಾಳ. ಇವರೇ ಸಂಪ್ರದಾಯಗಳನ್ನು ಸಮರ್ಥಿಸುವವರನ್ನು ಪ್ರತಿಗಾಮಿಗಳು ಎಂದು ನಾಮಕರಣ ಮಾಡಿದ್ದಾರೆ. ಸಂಪ್ರದಾಯ ಮೂಢನಂಬಿಕೆಗಳನ್ನು ಪೋಷಿಸುತ್ತದೆ. ಹಿಂದಿನವರು ಮಾಡಿದರೆಂಬ ಕಾರಣಕ್ಕೆ ನಾವು ಕೆಲವು ಆಚರಣೆಗಳನ್ನು ಮಾಡುತ್ತೇವೆಯೇ ವಿನಾ ಅದನ್ನು ಏಕೆ ಮಾಡಬೇಕೆಂಬುದೇ ಗೊತ್ತಿಲ್ಲ. ಇದು ವಿಚಾರವಂತರ ಲಕ್ಷಣವಲ್ಲ. ಅವರಿಗೆ ಭೂಷಣವೂ ಅಲ್ಲ ಎಂಬುದು ಪ್ರಗತಿಪರವಾದ. ಹಾಗಾಗಿ ಸಂಪ್ರದಾಯಗಳು ಅವೈಜ್ಞಾನಿಕ, ಅನೈತಿಕತೆ ಎಂಬಿತ್ಯಾದಿ ದೂರುಗಳನ್ನು ಪದೇಪದೇ ಕೇಳುತ್ತೇವೆ. ಆದರೆ ಇಂಥ ವಾದಗಳಿಗೆ ಸ್ಪಷ್ಟತೆ ಇಲ್ಲ. ಪಾಶ್ಚಾತ್ಯರು ಉಲ್ಲೇಖಿಸಿದಅದೆಷ್ಟೋ ಆಚರಣೆಗಳು ಇಂದು ಇಲ್ಲವೇ ಇಲ್ಲ. ತಾನಾಗೇ ಅಳಿದುಹೋಗಿದೆ. ಹಲವಷ್ಟನ್ನು ಕಾನೂನಿನಿಂದ ನಿಷೇಧಿಸಲಾಗಿದೆ. ಆದಾಗ್ಯೂ ನಮ್ಮ ಸಂಪ್ರದಾಯಗಳು ಅನಾಗರಿಕ ಎಂದು ಗಿಳಿಪಾಠ ಮಾಡುವುದರಲ್ಲಿ ಅರ್ಥವಿದೆಯೇ? ಸಂಪ್ರದಾಯಗಳಲ್ಲಿ ಇಷ್ಟೆಲ್ಲ ಕೆಡುಕುಗಳಿದ್ದರೆ ಭಾರತದೇಶ ಸಾವಿರಾರು ವರ್ಷ ಹೇಗೆ ಉಳಿದು ಬೆಳೆದು ಬಂದಿದೆ? ನಮಗೆ ನಮ್ಮ ಸಂಪ್ರದಾಯದ ಕುರಿತು ಈ ರೀತಿಯ ನಕಾರಾತ್ಮಾಕ ಭಾವನೆ ಬೆಳೆಯಲು ಕಾರಣವೇನು?
ನಾವು ಮನುಷ್ಯನ ಮುಂದುವರಿಕೆಯನ್ನು ಗುರುತಿಸುವುದು ಪಾಶ್ಚಾತ್ಯರು ಹಾಕಿಕೊಟ್ಟ ಮಾನದಂಡದ ಮೇಲೆ. ಅದಾವುದೆಂದರೆ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಈ ಹಿನ್ನೆಲೆಯಲ್ಲಿ ಸೃಷ್ಟಿಸಿಕೊಂಡ ಹಲವು ತತ್ವಗಳು. ಅದಕ್ಕಾಗೇ ಪಶ್ಚಿಮದ ನಾಗರಿಕತೆ ನಮಗೆ ಪ್ರಗತಿಯ ಪ್ರತೀಕವಾಗಿ ಕಾಣುತ್ತದೆ. ಅವರನ್ನು ಅನುಕರಿಸಿ ಅವರಂತೆ ಆಗುವುದೇ ನಮ್ಮ ಪ್ರಗತಿಯ ಕನಸಾಗಿದೆ! ಭಾರತದ ಹಳೆಯದನ್ನೆಲ್ಲ ತ್ಯಜಿಸಿ ಪಾಶ್ಚಾತ್ಯರ ಹೊಸತ್ನನ ಅಳವಡಿಸಿಕೊಳ್ಳುತ್ತ ಹೋಗುವುದೇ ದೇಶದ ಪ್ರಗತಿ ಅಂದುಕೊಳ್ಳಲಾಗಿದೆ. ಇದಕ್ಕಾಗೇ ನಮ್ಮ ಸಂಪ್ರದಾಯಗಳು ಕನಿಷ್ಟ ಪಶ್ಚಿಮದ ಸಂಪ್ರದಾಯಗಳು ಶ್ರೇಷ್ಠ ಎಂದೆನಿಸುವುದು. ಆರತಿ ಎತ್ತಿ ಹುಟ್ಟುಹಬ್ಬ ಆಚರಿಸಿದರೆ ಹಿಂದುಳಿಯುವಿಕೆ, ಕೇಕ್ ಕತ್ತರಿಸಿ ‘ಹ್ಯಾಪಿ ಬರ್ತಡೆ’ ಅಂದರೆ ಮುಂದುವರಿದ ಲಕ್ಷಣ. ಯಾಕೆ ಹೀಗೆ? ಇದೆಲ್ಲ ಅರ್ಥವಾಗಬೇಕಾದರೆ ನಮ್ಮ ಮಸ್ತಕಕ್ಕೆ ಮೆತ್ತಿಕೊಂಡ ತಪ್ಪು ತಿಳುವಳಿಕೆಯನ್ನು ತೊಳೆದುಕೊಳ್ಳಬೇಕು.
ಪಾಶ್ಚಾತ್ಯರು ತಮ್ಮ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಲ್ಲಿ ಭಾರತವನ್ನು ನೋಡಿದ್ದರು ಎಂಬುದನ್ನು ಗಮನಿಸಬೇಕು. ಮೂತರ್ಿಪೂಜೆ ಮಾಡುವವರು ನೀತಿಭ್ರಷ್ಟರು, ಮೂಢನಂಬಿಕೆಯವರು ಎಂಬುದು ಅವರ ಸಿದ್ಧಾಂತ. ಹಾಗಾಗಿ ಭಾರತೀಯರ ಸಂಪ್ರದಾಯಗಳೆಲ್ಲವೂ ಭ್ರಷ್ಟ ಧಾಮರ್ಿಕ ಆಚರಣೆಗಳೆಂಬ ಅರ್ಥದಲ್ಲಿ ನೋಡಿದರು. ಇದನ್ನೇ ಹಿಂದೂಯಿಸಂ ಎಂದು ಕರೆದರು. ಭಾರತೀಯ ಸಂಸ್ಕೃತಿ ಮೂಢ ಆಚರಣೆಯಲ್ಲಿ ಮುಳುಗಿ ಭ್ರಷ್ಟಗೊಂಡಿದೆ ಎಂಬರ್ಥದ ಇತಿಹಾಸ ಬರೆದರು. ಇದನ್ನೇ ಭಾರತದ ಸುಧಾರಣಾವಾದಿಗಳೂ ಕೂಡ ವೇದವಾಕ್ಯ ಎಂದು ನಂಬಿದರು. ಪಾಶ್ಚಾತ್ಯರಿಗೆ ನಮ್ಮ ಕುರಿತಾದ ಅನುಭವ ಹಾಗಿತ್ತು. ಅದನ್ನೇ ಬರೆದುಕೊಂಡರು. ನಮ್ಮ ‘ಅನುಭವ’ ಅವರ ಅನುಭವಕ್ಕಿಂತ ಬೇರೆ ಅನಿಸಲೇ ಇಲ್ಲ ನಮ್ಮವರಿಗೆ. ಇಂದಿಗೂ ಕೂಡ ಅನಿಸುತ್ತಿಲ್ಲ. ಅಷ್ಟರಮಟ್ಟಿಗೆ ವಸಾಹತು ಪ್ರಭಾವ ನಮ್ಮನ್ನು ಕುರುಡರನ್ನಾಗಿ ಮಾಡಿದೆ. ಇದೇ ಇಂದಿನ ವಿದ್ಯಾವಂತರ ಸಮಸ್ಯೆ.
ವಸಾಹತು ಆಳ್ವಿಕೆಯ ಕಾಲದಲ್ಲಿ ಹಾಗೂ ಆಧುನಿಕ ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಗಳ ಕುರಿತು ಇದೇ ವಿಚಾರವಾದ ಮುಂದುವರಿಯುತ್ತಾ ಬಂದಿತು. ಪ್ರಗತಿಪರರು ಪಾಶ್ಚಾತ್ಯಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ಸಂಪ್ರದಾಯದ ಅರ್ಥಹೀನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದರು. ಸಂಪ್ರದಾಯಗಳನ್ನು ನೆಚ್ಚಿಕೊಂಡ ವಿದ್ಯಾವಂತರಿಗೆ ದೊಡ್ಡ ಸವಾಲೇ ಎದುರಾಯಿತು. ಆಗ ಅವರು ಸಂಪ್ರದಾಯಗಳಲ್ಲಿ ವೈಜ್ಞಾನಿಕ ಕಾರಣಗಳನು ಹುಡುಕಲು ಆರಂಭಿಸಿದರು. ಏಕೆಂದರೆ ಸಂಪ್ರದಾಯಗಳು ಅವೈಜ್ಞಾನಿಕ ಎಂಬ ಕಾರಣಕ್ಕೆ ಮೌಢ್ಯ ಎಂದದ್ದರಿಂದ ಅವನ್ನು ಸಂಪೂರ್ಣ ವೈಜ್ಞಾನಿಕರಣಗೊಳಿಸುವ ಪ್ರಯತ್ನ ನಡೆಯಿತು. ಯಜ್ಞ ಮಾಡುವುದು, ಮಂತ್ರ ಹೇಳುವುದು, ತೀರ್ಥ ಕುಡಿಯುವುದು- ಎಲ್ಲದಕ್ಕೂ ವೈಜ್ಞಾನಿಕ ಕಾರಣ ಹುಡುಕುವ ಪ್ರಯತ್ನ ನಡೆಯಿತು. ಆಗ ಅಲ್ಪಸ್ವಲ್ಪ ವಿಜ್ಞಾನ ತಿಳಿದವರಿಗೆ ಇದನ್ನು ನಂಬುವುದು ಇನ್ನೂ ಕಷ್ಟವಾಯಿತು. ಸಂಪ್ರದಾಯ ಮತ್ತು ವೈಜ್ಞಾನಿಕ ಕಾರಣಕ್ಕೆ ಏಕೆ ಸಂಬಂಧ ಇರಬೇಕು ಎಂದು ಯಾರೂ ಪ್ರಶ್ನಿಸಲೇ ಇಲ್ಲ.
ವಿದ್ಯಾವಂತರಾದಂತೆ ವೈಚಾರಿಕತೆ ಬೆಳೆಯುತ್ತದೆ. ಆದ್ದರಿಂದ ಸಂಪ್ರದಾಯ ಪಾಲಿಸಿದರೆ ತಮಗೆ ವೈಚಾರಿಕತೆ ಇಲ್ಲ ಎಂದು ತಿಳಿಯುತ್ತಾರೆಂಬ ಕೀಳರಿಮೆ ಅನೇಕ ವಿದ್ಯಾವಂತರಿಗಿದೆ. ಹಾಗಾದರೆ ಸಂಪ್ರದಾಯವಾದಿಗಳಿಗೆ ವೈಚಾರಿಕತೆಯೇ ಇಲ್ಲ ಅನ್ನೋಣವೇ? ಸಂಪ್ರದಾಯದ ಪರವಾಗಿದ್ದ ವಿದ್ಯಾವಂತರಲ್ಲಿ ವೈಜ್ಞಾನಿಕ ಪ್ರಜ್ಞೆ ಇಲ್ಲವೆಂದರ್ಥವೇ? ಎಷ್ಟೋ ವಿಜ್ಞಾನಿಗಳು ದೇವರ ಫೋಟೋ ಪೂಜಿಸುವುದು, ಹಣೆಗೆ ಕುಂಕುಮ ಇಡುವುದು ಇತ್ಯಾದಿಗಳನ್ನು ನೋಡುತ್ತೇವೆ. ಅಂದಾಕ್ಷಣ ಅವರು ವಿಜ್ಞಾನಿಗಳಲ್ಲ. ಅವರಿಗಿಂತ ಸಂಪ್ರದಾಯಬಿಟ್ಟವರೇ ವಿಜ್ಞಾನಿಗಳೆಂದು ಒಪ್ಪಿಕೊಳ್ಳಲು ಸಾಧ್ಯವೇ? ಸಂಪ್ರದಾಯ ಅವೈಜ್ಞಾನಿಕವಾಗಿದ್ರೆ ಸಂಪ್ರದಾಯದ ಭಾರತದಲ್ಲಿ ಎಷ್ಟೆಲ್ಲ ವಿಜ್ಞಾನ ಹೇಗೆ ಬೆಳೆಯುತ್ತಿತ್ತು? ಶಾಸ್ತ್ರೋಕ್ತ ಪೂಜೆ ಮಾಡಿ ರಾಕೆಟ್ ಹಾರಿಸಿದರೆ ಪೂಜೆ ಮಾಡಿದ್ದರಿಂದ ರಾಕೆಟ್ ಹಾರಿತು ಎಂಬುದು ಎಷ್ಟು ಹಾಸ್ಯಾಸ್ಪದವೋ ಪೂಜೆ ಮಾಡುವುದರಿಂದ ರಾಕೆಟ್ ಹಾರುವುದಿಲ್ಲ ಎಂಬ ವಾದವೂ ಅಷ್ಟೇ ಹಾಸ್ಯಾಸ್ಪದ. ಇಲ್ಲಿ ಎಂಥವನಿಗೂ ಸ್ಪಷ್ಟವಾಗುತ್ತದೆ. ರಾಕೆಟ್ಗ ಪೂಜೆ ಮಾಡುವುದು ನಮ್ಮ ಸಂಪ್ರದಾಯ ಹಾಗೂ ನಂಬಿಕೆ. ರಾಕೆಟ್ ಹಾರುವುದು ವಿಜ್ಞಾನದಿಂದ. ಹೀಗಿದ್ದಾಗ ಮುಜುಗರ ಪಡುವುದು ಏನಿದೆ? ಹಾಗಾಗಿ ಸಂಪ್ರದಾಯ ಬೇರೆ, ವಿಜ್ಞಾನ ಬೇರೆ, ವೈಚಾರಿಕತೆ ಬೇರೆ. ಇವೆಲ್ಲವೂ ಒಟ್ಟಿಗೇ ಇರಬೇಕೆಂದೇನೂ ಇಲ್ಲ. ಒಟ್ಟಿಗೆ ಇರಬಾರದೆಂಬ ನಿಯಮವೂ ಇಲ್ಲ. ಇದು ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾರದು.
ವಿಜ್ಞಾನ ಶ್ರೇಷ್ಟ ಎಂದು ನಂಬಿಕೊಂಡಾಕ್ಷಣ ಸಂಪ್ರದಾಯ ಕನಿಷ್ಠ ಎಂದು ಏಕೆ ಭಾವಿಸಬೇಕು? ವಿಜ್ಞಾನ ಬೇರೆ ಸಂಪ್ರದಾಯ ಬೇರೆ. ವಿಜ್ಞಾನ ಈ ಪ್ರಪಂಚದ ಕುರಿತು ಜ್ಞಾನಗಳಿಸುವ ಸಾಧನವಾದರೆ ಸಂಪ್ರದಾಯ ಈ ಸಮುದಾಯ ಕಟ್ಟುವ ಸಾಧನವಾಗಿದೆ. ಜಗತ್ತಿನಲ್ಲಿ ಸಮುದಾಯ ಜೀವನನ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಒಂದಲ್ಲ ಒಂದು ರೀತಿಯ ಸಂಪ್ರದಾಯ ಇದ್ದೇ ಇದೆ.
ಸಂಪ್ರದಾಯ ಅಂದರೆ ಏನೆಂದು ಯಾರಾದರೂ ನಮ್ಮನ್ನು ಕೇಳಿದರೆ ತಕ್ಷಣ ಎತ್ತರಿಸಲು ಸಾಧ್ಯವಾಗದು. ಏಕೆಂದರೆ ಸಂಪ್ರದಾಯ ಇರುವುದು ಆಚರಿಸಲಿಕ್ಕೇ ವಿನಾ ಅದರ ಕುರಿತು ವ್ಯಾಖ್ಯಾನ ನೀಡಲಿಕ್ಕಲ್ಲ. ಸಂಪ್ರದಾಯದ ಲಕ್ಷಣಗಳೇ ಅದರ ಶಕ್ತಿಯನ್ನು ಸೂಚಿಸುತ್ತವೆ.
1. ಸಂಪ್ರದಾಯಗಳು ಆಚರಣೆಯಲ್ಲೇ ಅಸ್ತಿತ್ವವನ್ನು ಹೊಂದಿರುತ್ತವೆಯೇ ವಿನಾ ಯಾವುದೇ ವೈಜ್ಞಾನಿಕ ಸಿದ್ಧಾಂತಗಳನ್ನಾಧರಿಸಿಯಲ್ಲ. ಇದಕ್ಕೆ ಸಿದ್ಧ ಶಾಸನಗಳಿಲ್ಲ. ಹಿಂದಿನವರನ್ನು ನೋಡಿ ಆಚರಣೆಗಳನ್ನು ಕಲಿಯಲಾಗುತ್ತದೆ.
2. ಕಾಲಕ್ಕೆ ತಕ್ಕಂತೆ ಬದಲಾಗುವುದೇ ಸಂಪ್ರದಾಯದ ಗುಣ. ನಾವು ಸಂಪ್ರದಾಯವನ್ನು ಪಾಲಿಸುವುದೊಂದೇ ಅಲ್ಲ, ಅದನ್ನು ಬದಲಿಸುತ್ತಲೂ ಇರುತ್ತೇವೆ. ಹೀಗಿದ್ದಾಗ ಸಂಪ್ರದಾಯ ನಿಂತ ನೀರಿನಂತೆ ಅನ್ನುವುದು ಯಾವ ಸೀಮೆಯ ವೈಚಾರಿಕತೆ?
3. ಸಂಪ್ರದಾಯಗಳು ಇದನ್ನು ಹೀಗೇ ಮಾಡಬೇಕೆಂದು ಕಟ್ಟಳೆ ಹೇರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತೇವೆ.
4. ಸಂಪ್ರದಾಯಗಳು ಅವುಗಳ ಆಚರಣೆಗೆ ವಿಶೇಷ ಅರ್ಥ ವ್ಯಾಖ್ಯಾನ ನೀಡುವುದಿಲ್ಲ.
5. ಒಂದು ಸಂಪ್ರದಾಯ ಯಾವತ್ತೂ ಇನ್ನೊಂದು ಸಂಪ್ರದಾಯವನ್ನು ದ್ವೇಷಿಸುವುದಿಲ್ಲ, ಗೌರವಿಸುತ್ತದೆ.

Recent Comments